ADVERTISEMENT

ಸಮ್ಮಿಶ್ರ ಸರ್ಕಾರದ ಹಡಗು ಯಾವಾಗ ಬೇಕಾದರೂ ಮುಳುಗಬಹುದು: ಬಿ.ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 10 ಮೇ 2019, 14:39 IST
Last Updated 10 ಮೇ 2019, 14:39 IST
 ಬಿ. ಶ್ರೀರಾಮುಲು
ಬಿ. ಶ್ರೀರಾಮುಲು   

ಹೊಸಪೇಟೆ: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಹಡಗಿನ ಆಯುಷ ಮುಗಿದಿದೆ. ಈ ಹಡಗು ಯಾವಾಗ ಬೇಕಾದರೂ ಮುಳುಗಬಹುದು’ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಕಮಲಾಪುರದಲ್ಲಿ ಶುಕ್ರವಾರ ಸಂಜೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಗೆ ಪಕ್ಷದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

‘ಮುಳುಗುವ ಹಡಗಿನಲ್ಲಿ ಯಾರೂ ಕೂರುವುದಿಲ್ಲ. ಅದನ್ನು ಯಾರೂ ನಂಬುವುದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಮರೀಚಿಕೆಯಾಗಿದೆ. ಮೊದಲು ರೆಸಾರ್ಟ್‌ ರಾಜಕೀಯ, ನಂತರ ಚುನಾವಣೆ ನೀತಿ ಸಂಹಿತೆ, ಎರಡೂ ಪಕ್ಷದವರು ಪರಸ್ಪರ ದೋಷಾರೋಪಣೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ’ ಎಂದು ದೂರಿದರು.

ADVERTISEMENT

ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಾತನಾಡಿ, ‘ಕಮಲಾಪುರ ಪಟ್ಟಣ ಪಂಚಾಯಿತಿ ಸೇರಿದಂತೆ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪರ ವಾತಾವರಣವಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಒಳ್ಳೆಯ ಅವಕಾಶವಿದ್ದು ಕಾರ್ಯಕರ್ತರು ಶ್ರಮವಹಿಸಿ ಕೆಲಸ ನಿರ್ವಹಿಸಬೇಕು’ ಎಂದು ಸೂಚಿಸಿದರು.

ಪಕ್ಷದ ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ಸ್ವಾಮಿ, ‘ಬಿ.ಎಸ್‌.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ ಅನುದಾನದಲ್ಲಿ ವಿಜಯನಗರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ’ ಎಂದರು.

ಮುಖಂಡರಾದ ಮೃತ್ಯುಂಜಯಜಿನಗಾ, ಅನಿಲ್ ನಾಯ್ಡು, ವೈ. ದೇವೇಂದ್ರಪ್ಪ, ಪಂತರ್ ಜಯಂತ್, ವಸಂತ್, ಬಸವರಾಜ ನಾಲತ್ವಾಡ, ರಾಘವೇಂದ್ರ, ಸುರೇಶ್ ಗೌಡ, ವೆಂಕಟೇಶ್, ಜಯತೀರ್ಥ, ಪಾರ್ಥಸಾರಥಿ, ನಾಗಯ್ಯ, ಲಕ್ಷ್ಮಣ್ ಬಸಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.