ಮಂಗಳೂರು: ‘ಭಕ್ತಿಯ ಹೆಸರಿನಲ್ಲಿ ಜನರನ್ನು ವಂಚಿಸಿ ಹಲವೆಡೆ ಅಧಿಕಾರಕ್ಕೇರಿದ ಬಿಜೆಪಿ ಕೇರಳದಲ್ಲೂ ತಳವೂರಲು ಯತ್ನಿಸುತ್ತಿದೆ. ಸಿಪಿಎಂ ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಸಿಪಿಎಂ ಕೇಂದ್ರ ಸಮಿತಿ ಸದಸ್ಯೆಯಾಗಿರುವ ಕೇರಳದ ಶಾಸಕಿ ಶೈಲಚಾ ಟೀಚರ್ ಹೇಳಿದರು.
ಗುರುಪುರ ಕೈಕಂಬನದಲ್ಲಿ ನಡೆಯುತ್ತಿರುವ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ 23ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿ ಹೆಸರಿಗೆ ಮಾತ್ರ ಬಿಜೆಪಿ ಸರ್ಕಾರ ಇದೆ. ಆಡಳಿತ ನಡೆಸುವುದು ಸಂಘ ಪರಿವಾರ. ಈ ಸಂಘ ಪರಿವಾರವು ಭಕ್ತಿಯ ಹೆಸರಲ್ಲಿ ಜನರನ್ನು ಮೋಸಮಾಡುತ್ತದೆ ಎಂದರು.
ರೈತರ ಹೋರಾಟವು ಕೇವಲ ನರೇಂದ್ರ ಮೋದಿಯ ವಿರುದ್ಧವಷ್ಟೇ ಅಲ್ಲ, ದೇಶದಲ್ಲಿ ಆಡಳಿತ ನಡೆಸುತ್ತಿರುವ ಕಾರ್ಪೊರೇಟ್ ಕಂಪನಿಗಳ ವಿರುದ್ಧವೂ ಆಗಿದೆ. ಪ್ರಧಾನಿ ನರೇಂದ್ರ ಮೋದಿ, ರೈತರ ಅಭಿವೃದ್ಧಿ ಹೆಸರಲ್ಲಿ ಕೃಷಿ ಕಾಯ್ದೆಯನ್ನು ಜಾರಿಗೊಳಿಸಿದರು. ಈ ಕಾಯ್ದೆಯನ್ನು ಸಮರ್ಥಿಸಿದ್ದ ಬಿಜೆಪಿ ಕಾರ್ಯಕರ್ತರು ಈಗ ಮೌನವಾಗಿದ್ದಾರೆ ಎಂದು ಟೀಕಿಸಿದರು.
ತುಳುನಾಡಿದ ಸಂಸ್ಕೃತಿಯಂತೆ ಶೈಲಜಾ ಟೀಚರ್ ತಲೆಗೆ ಮುಟ್ಟಾಳೆ ಇಟ್ಟು, ಫಲಕ ನೀಡಿ ಗೌರವಿಸಲಾಯಿತು. ಪಕ್ಷದ ಜಿಲ್ಲಾ ಮುಖಂಡ ವಸಂತ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳದ ಸ್ವಾಗತ ಸಮಿತಿಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿದರು. ಪಕ್ಷದ ಮುಖಂಡರಾದ ಕೆ.ಎಸ್. ಶ್ರೀಯಾನ್, ಯು.ಬಿ. ಲೋಕಯ್ಯ, ಯಾದವ ಶೆಟ್ಟಿ, ಕೃಷ್ಣಪ್ಪಸಾಲ್ಯಾನ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್, ಮನೋಜ್ ವಾಮಂಜೂರು ಇದ್ದರು.
ಪೊಳಲಿ ದ್ವಾರದ ಬಳಿಯಿಂದ ಸಮ್ಮೇಳನದ ವೇದಿಕೆಯವರೆಗೆ ತಾಲೀಮು, ಹುಲಿವೇಷ ಕುಣಿತ, ಯಕ್ಷಗಾನ ವೇಷಗಳನ್ನು ಒಳಗೊಂಡ ಕಾರ್ಮಿಕರ ಮೆರವಣಿಗೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.