ಸಿರುಗುಪ್ಪ: ನಗರಸಭೆ ಅಧಿಕಾರಿಗಳು ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 400ಕೆಜಿಯಷ್ಟು ₹60 ಸಾವಿರದ ಮೌಲ್ಯದ ಪ್ಲಾಸ್ಟಿಕ್ ಅನ್ನು ವಶಕ್ಕೆ ತೆಗೆದುಕೊಂಡರು.
ನಗರಸಭೆ ಪೌರಾಯುಕ್ತ ಗಂಗಾಧರ ಮಾರ್ಗದರ್ಶನದಲ್ಲಿ ಹಿರಿಯ ಆರೋಗ್ಯ ನಿರೀಕ್ಷರಾದ ಸ್ವರ್ಣಲತಾ, ರಂಗಸ್ವಾಮಿ, ಕಿರಿಯ ಆರೋಗ್ಯ ನಿರೀಕ್ಷ ಹೀಮಂತ್ ರಾಜ್, ಸಮುದಾಯ ಸಂಚಾಲಕರಾದ ಎಂ.ಅಶ್ವಿನಿ, ಭುವನೇಶ್ವರಿ, ಅಂಬಿಕಾ, ಶೃತಿ, ಸುಮಿತ್ರ, ರಂಗವೇಣಿ ನೇತೃತ್ವದಲ್ಲಿ ಗುರುವಾರ ದಾಳಿ ನಡೆಸಿ, ಪ್ಲಾಸ್ಟಿಕ್ ಚೀಲ, ಪತ್ರಾಳೆಗಳನ್ನು ವಶಕ್ಕೆ ತೆಗೆದುಕೊಂಡು ಪರಿಸರಕ್ಕೆ ಪೂರಕವಾಗುವ ವಸ್ತುಗಳನ್ನು ಬಳಕೆ ಮಾಡುವಂತೆ ಸಲಹೆ ನೀಡಿದರು.
ಈಗಾಗಲೇ ಪ್ಲಾಸ್ಟಿಕ್ ನಿಷೇಧದ ಕುರಿತು ನಗರದ ಎಲ್ಲ ವ್ಯಾಪಾರಸ್ಥರಿಗೂ ಸೂಚನೆ ನೀಡಲಾಗಿದ್ದರೂ ಕೆಲವು ವ್ಯಾಪಾರಿಗಳು ಇನ್ನೂ ಪ್ಲಾಸ್ಟಿಕ್ ಬಳಸುತ್ತಿದ್ದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಅಂಗಡಿ ಮತ್ತು ಉದ್ದಿಮೆದಾರರಲ್ಲಿ ಬಳಸದಂತೆ ತಿಳಿಸಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಜಪ್ತಿ ಮಾಡಿ, ಉದ್ಯಮದಾರರಿಗೆ ದಂಡ ವಿಧಿಸಿಲಾಯಿತು.
’ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ತಕ್ಷ ಣವೇ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆ ರದ್ದುಗೊಳಿಸಿ ಬಟ್ಟೆ, ಕೈ ಚೀಲ ಬಳಕೆಗೆ ಮುಂದಾಗಬೇಕಿದೆ’ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಉದ್ದಿಮೆ ಪರವಾನಗೆ ತೆಗೆದುಕೊಳ್ಳುವಂತೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.