ಸಿರುಗುಪ್ಪ ತಾಲ್ಲೂಕಿನ ಬಸರಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸವಿತ್ತಿರುವ ವಿದ್ಯಾರ್ಥಿಗಳು.
ಸಿರುಗುಪ್ಪ: ತಾಲ್ಲೂಕಿನ ಸರ್ಕಾರಿ ಶಾಲೆಗಳ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಕಳೆದ ನಾಲ್ಕು ತಿಂಗಳಿಂದ ಅನುದಾನ ಬಿಡುಗಡೆಯಾಗದೆ ಇರುವುದರಿಂದ ಶಿಕ್ಷಕರು ಬಿಸಿಯೂಟಕ್ಕೆ ಪದಾರ್ಥ ಹೊಂದಿಸಲು ಪರದಾಡುವಂತಾಗಿದೆ.
ಇಲಾಖೆಯಿಂದ ಅಕ್ಕಿ, ಬೆಳೆ, ಎಣ್ಣೆ ಪದಾರ್ಥಗಳು ಸರ್ಕಾರವೇ ಪೂರೈಸುತ್ತಿದೆ. ತರಕಾರಿ, ಸಾಂಬಾರು ಪುಡಿ, ಉಪ್ಪು ಮೊಟ್ಟೆ ಖರೀದಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ.
ಪ್ರಸ್ತುತ ತರಕಾರಿ ಮತ್ತು ಮೊಟ್ಟೆಯ ಬೆಲೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿದ್ದು ಬೆಲೆ ಏರಿಕೆಯಿಂದ ಶಿಕ್ಷಕರು ಸ್ವಂತ ಹಣ ಖರ್ಚು ಮಾಡಿಕೊಂಡು ತರಕಾರಿ, ಮೊಟ್ಟೆ ಖರೀದಿ ಮಾಡಿಕೊಂಡು ಶಾಲೆಗೆ ತರುತ್ತಿದ್ದಾರೆ, ಇನ್ನೂ ಕೆಲವರು ತರಕಾರಿ ಅಂಗಡಿಗಳಲ್ಲಿ ಬಾಕಿ ಉಳಿಸಿಕೊಂಡಿದ್ದು ಹೊರೆಯಾಗಿದೆ.
ತಾಲ್ಲೂಕಿನಲ್ಲಿ 72 ಕಿರಿಯ ಪ್ರಾಥಮಿಕ, 82 ಹಿರಿಯ ಪ್ರಾಥಮಿಕ, 32 ಪ್ರೌಢ ಶಾಲೆ, ಒಟ್ಟು 186 ಶಾಲೆಗಳಲ್ಲಿ 53610 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದ ಯೋಜನೆಗೆ ಒಳಪಡುತ್ತಿದ್ದಾರೆ.
ಮಕ್ಕಳಿಗೆ ಪೌಷ್ಟಿಕಾಂಶವಿರುವ ಆಹಾರ ಕೊಡಬೇಕು ಎಂದು ಸರ್ಕಾರ ಹೇಳುತ್ತದೆ, ಆದರೆ ಅನುದಾನ ನೀಡದೆ ಪೌಷ್ಟಿಕ ಆಹಾರ ಒದಗಿಸುವುದು ಹೇಗೆ ಸಾಧ್ಯ?. ತರಕಾರಿ ಇಲ್ಲದೆ ರಸಂ ಕೊಟ್ಟರೂ ಹಾಗೂ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸಬೇಕಿದೆ, ಒಂದು ದಿನ ಮೊಟ್ಟೆ ನೀಡದಿದ್ದರೆ ಸ್ಥಳೀಯ ಪೋಷಕರು, ಸಂಘ ಸಂಸ್ಥೆಗಳು, ಇಲಾಖೆಗೆ ದೂರುಗಳು ಹೇಳುತ್ತಾರೆ, ನಿರ್ವಹಣೆ ತಲೆನೋವಾಗಿದೆ ಎನ್ನುತ್ತಾರೆ ಶಿಕ್ಷಕರು.
1ರಿಂದ 5ನೇ ತರಗತಿ ಪ್ರತಿ ವಿದ್ಯಾರ್ಥಿಗೆ ₹ 2.12 ಹಾಗೂ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ₹ 3.01, ಮೊಟ್ಟೆ ಖರೀದಿಗೆ ₹6, ಶೇಂಗಚಿಕ್ಕಿ ₹ 6 ಅನುದಾನ ನೀಡಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಮೊಟ್ಟೆ ಮತ್ತು ಶೇಂಗಚಿಕ್ಕಿ ದೊರೆಯದೆ, ತಾಲ್ಲೂಕು ಕೇಂದ್ರಕ್ಕೆ ಹೋಗಿ ತರುವುದು ಅನಿರ್ವಾಯವಾಗಿದೆ, ಇಷ್ಟು ಹಣವನ್ನು ಈಗ ಶಿಕ್ಷಕರು ಭರಿಸಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಹಣ ಬಿಡುಗಡೆಯಾಗದೆ ಬಿಸಿಯೂಟ ನಿರ್ವಹಣೆ ಮಾಡುವುದು ಶಿಕ್ಷಕರಿಗೆ ತೊಂದರೆಯಾಗಿದೆ.
ತರಕಾರಿ, ಮೊಟ್ಟೆ ಹಣ ಬಿಡುಗಡೆ ಆಗದಿರುವುದರಿಂದ ಅಂಗಡಿಗಳಲ್ಲಿ ಸಾಲದ ರೂಪದಲ್ಲಿ ಖರೀದಿ ಮಾಡಿದು, ಹಣ ನೀಡುವಂತೆ ತರಕಾರಿ ವ್ಯಾಪಾರಿಗಳು ನೆರವಾಗಿ ಶಾಲೆಗಳಿಗೆ ನಿತ್ಯ ಅಲೆಯುತ್ತಿದ್ದಾರೆ, ಪಾಠ ಪ್ರವಚನ ನೋಡಬೇಕಾ ಪೌಷ್ಠಿಕ ಆಹಾರ ನಿರ್ವಹಣೆ ಮಾಡಬೇಕಾ? ಇದು ಶಿಕ್ಷಕರಿಗೆ ಯಕ್ಷ ಪ್ರಶ್ನೆಯಾಗಿದೆ ಎಂದು ಶಿಕ್ಷಕ ತಮ್ಮ ಅಳಲು ‘ಪ್ರಜಾವಾಣಿ’ ಜೊತೆಗ ಹೇಳಿಕೊಂಡರು.
ಬಿಸಿಯೂಟ ಯೋಜನೆಯಲ್ಲಿ ತರಕಾರಿ ಅನುದಾನ ಬಿಡುಗಡೆ ತಾಂತ್ರಿಕ ವಿಳಂಬವಾಗಿದೆ ಮುಂದಿನ ವಾರ ಅನುದಾನ ಬಿಡುಗಡೆಯಾಗುತ್ತದೆರಾಮ್ ಮೋಹನ್ ಬಾಬು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆ ಸಿರುಗುಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.