ಹೊಸಪೇಟೆ: ಇಲ್ಲಿನ ‘ಸಾಧ್ಯ’ ಬುದ್ಧಿಮಾಂದ್ಯವಸತಿಯುತ ಶಾಲೆ ಮಕ್ಕಳು ಕ್ರೀಡೆಯಲ್ಲಿ ತೋರಿದ ಉತ್ತಮ ಸಾಧನೆಯನ್ನು ಪರಿಗಣಿಸಿ ಭಾರತೀಯ ಕ್ರೀಡಾ ಪ್ರಾಧಿಕಾರವು ನಗದು ಬಹುಮಾನ ನೀಡಿದೆ.
ಪವರ್ ಲಿಫ್ಟಿಂಗ್ನಲ್ಲಿ ತಲಾ ಎರಡು ಬೆಳ್ಳಿ, ಕಂಚಿನ ಪದಕ ಗೆದ್ದ ಎಚ್.ವಿ. ವೀಣಾ ಅವರಿಗೆ ₹8 ಲಕ್ಷ ನಗದು, ನಾಲ್ಕು ಕಂಚಿನ ಪದಕ ಜಯಿಸಿದ ಸುಶಾಂತೋ ಬೋಸ್ ಅವರಿಗೆ ₹4 ಲಕ್ಷ, ಸೈಕ್ಲಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ತೋರಿದ ಓಂಕಾರ ಮಲ್ಲಪ್ಪ ರಾಜಗೋಲ್ಕರ್ ಅವರಿಗೆ ₹3 ಲಕ್ಷ ನಗದು ಬಹುಮಾನ ನೀಡಿದೆ.
ಈ ಮೂವರು ವಿದ್ಯಾರ್ಥಿಗಳು ಮಾರ್ಚ್ನಲ್ಲಿ ಅಬುಧಾಬಿಯಲ್ಲಿ ನಡೆದ ವಿಶೇಷ ಮಕ್ಕಳ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದರು.
‘ಶಾಲೆಯ ವಿದ್ಯಾರ್ಥಿಗಳ ಸಾಧನೆ ಗುರುತಿಸಿ, ಕ್ರೀಡಾ ಪ್ರಾಧಿಕಾರವು ನಗದು ಬಹುಮಾನ ನೀಡಿರುವುದು ಸಂತಸ ತಂದಿದೆ. ಇದರಿಂದ ಅವರ ಆತ್ಮಸ್ಥೈರ್ಯ ಹೆಚ್ಚಾಗಲಿದೆ’ ಎಂದು ಶಾಲೆಯ ಮುಖ್ಯಸ್ಥೆ ಕೆ.ಟಿ. ಆರತಿ ತಿಳಿಸಿದರು.
‘ವಿದ್ಯಾರ್ಥಿಗಳಿಗೆ ಬಂದ ನಗದು ಹಣವನ್ನು ಅಂಚೆ ಕಚೇರಿಯ ಎಂ.ಐ.ಎಸ್. ಯೋಜನೆಯಡಿಯಲ್ಲಿ ಹೂಡಿಕೆ ಮಾಡಿ ಅವರಿಗೆ ಬಡ್ಡಿ ಬರುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ತರಬೇತುದಾರ ದಯಾನಂದ ಕಿಚಿಡಿ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.