ವಿಜಯನಗರ (ಹೊಸಪೇಟೆ): ಸೇವಿಯರ್ ಚಾರಿಟೇಬಲ್ ಟ್ರಸ್ಟ್ ಮಾ. 6, 7ರಂದು ದೃಷ್ಟಿದೋಷವುಳ್ಳವರಿಗೆ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ನಗರದ ರೋಟರಿ ಕ್ಲಬ್ನಲ್ಲಿ ಆಯೋಜಿಸಿದೆ.
‘ಎರಡನೇ ವರ್ಷದ ಚದುರಂಗ ಸ್ಪರ್ಧೆಗೆ ರಾಜ್ಯದ ನಾನಾ ಭಾಗಗಗಳ 120 ಜನ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಆಸಕ್ತರು ಶುಕ್ರವಾರದೊಳಗೆ (ಮಾ.5) ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ಈ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಡಿ.ಎನ್. ಸಂತೋಷ ಕುಮಾರ್ ಗುರುವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಸಲದ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಆಟಗಾರರಾದ ಶ್ರೀಕೃಷ್ಣ ಉಡುಪ, ಕಿಶನ್ ಪಾಲ್ಗೊಳ್ಳುತ್ತಿದ್ದಾರೆ. ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರಿಗೆ ಆರ್ಬಿಟರ್ ಆಗಿದ್ದ ಮಂಜುನಾಥ ಅವರು ಆರ್ಬಿಟರ್ ಆಗಿ ಕೆಲಸ ನಿರ್ವಹಿಸುವರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕೆ ವಯಸ್ಸಿನ ಮಿತಿ ಇಲ್ಲ’ ಎಂದು ಹೇಳಿದರು.
‘20 ನಗದು ಬಹುಮಾನಗಳನ್ನು ಇಡಲಾಗಿದೆ. ಪ್ರಥಮ ಬಹುಮಾನ ₹10,000 ನಗದು, ಪ್ರಮಾಣ ಪತ್ರ ಹಾಗೂ ಟ್ರೋಫಿ ಇದೆ. ಮಾ. 5ರಂದು ಬೆಳಿಗ್ಗೆ 9ಕ್ಕೆ ರೋಟರಿ ವೃತ್ತದಿಂದ ರೋಟರಿ ಕಚೇರಿ ವರೆಗೆ ಜಾಥಾ ನಡೆಯಲಿದೆ. ಬಳಿಕ ಸ್ಪರ್ಧೆಗೆ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಚಾಲನೆ ಕೊಡುವರು. ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 6363436930, 9611565666 ಸಂಪರ್ಕಿಸಬಹುದು. ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ, ಕಾರ್ಯದರ್ಶಿ ಸಜ್ಜನ್ ಕಯಾಲ್, ಮಾಧ್ಯಮ ಉಸ್ತುವಾರಿ ಮಂಜುನಾಥ ಪತ್ತಿಕೊಂಡ, ಟ್ರಸ್ಟ್ ನಿರ್ದೇಶಕ ಚಂದ್ರಶೇಖರ ಹಟ್ಟಿ, ಉಪಾಧ್ಯಕ್ಷ ಅಬ್ದುಲ್ ನಬಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.