ಕಂಪ್ಲಿ: ‘ರೈತರ ಹಿತ ಕಾಪಾಡಲು ತಾಲ್ಲೂಕು ಆಡಳಿತ ಬದ್ಧವಾಗಿದ್ದು, ಅವರಿಗೆ ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟವಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಗಮಹರಿಸಬೇಕು’ ಎಂದು ತಹಶೀಲ್ದಾರ್ ಜೂಗಲ ಮಂಜುನಾಯಕ ಸೂಚಿಸಿದರು.
ಇಲ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆ ಗುಣಮಟ್ಟ ನಿಯಂತ್ರಣದಡಿ ಶುಕ್ರವಾರ ಆಯೋಜಿಸಿದ್ದ ಕೃಷಿ ಪರಿಕರ ವಿತರಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಬಾರದು, ಅಂಗಡಿಗಳ ಮುಂದೆ ದರಪಟ್ಟಿ ನಾಮಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂದರು.
ಸಿರುಗುಪ್ಪ ಸಹಾಯಕ ಕೃಷಿ ನಿರ್ದೇಶಕ ಸಿ.ಎ. ಮಂಜುನಾಥರೆಡ್ಡಿ ಮಾತನಾಡಿ, ಇಲಾಖೆ ಮಾರ್ಗಸೂಚಿಯಂತೆ ರೈತರಿಗೆ ಕೃಷಿ ಪರಿಕರ ವಿತರಣೆಯಾಗಬೇಕು. ಪ್ರತಿ ತಿಂಗಳು 5ರೊಳಗೆ ಕೃಷಿ ಪರಿಕರಗಳ ದಾಸ್ತಾನು, ಮಾರಾಟ ಕುರಿತ ಮಾಹಿತಿ ಒದಗಿಸಬೇಕು. ನಿಗದಿತ ನಮೂನೆಯ ಬಿಲ್ ವಿತರಿಸಬೇಕು. ಮಾರ್ಗಸೂಚಿ ಉಲ್ಲಂಘಿಸಿದ ವಿತರಕರ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಬಿ.ವಿ. ಗೌಡ ಮಾತನಾಡಿದರು. ಸಹಾಯಕ ನಿರ್ದೇಶಕಿ ಸಿ.ಆರ್. ಅಭಿಲಾಷ, ಕೃಷಿ ಅಧಿಕಾರಿಗಳಾದ ಕೆ. ಸೋಮಶೇಖರ, ಜ್ಯೋತಿ, ಕೃಷಿಕ ಸಂಘದ ಅಧ್ಯಕ್ಷ ವಿಪ್ರದ ನಾರಾಯಣಪ್ಪ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿ. ವೀರೇಶ್, ಘಟಕ ಅಧ್ಯಕ್ಷ ತಿಮ್ಮಪ್ಪನಾಯಕ, ಪಿ. ನಾರಾಯಣರೆಡ್ಡಿ, ಮುರಾರಿ, ಕೃಷಿ ಪರಿಕರ ವಿತರಕ ಕಲ್ಗುಡಿ ವಿಶ್ವನಾಥ ಸೇರಿದಂತೆ ತಾಲ್ಲೂಕಿನ ಕೃಷಿ ಪರಿಕರ ವಿತರಕರು, ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.