
ತೆಕ್ಕಲಕೋಟೆ: ಸಮೀಪದ ಬಲಕುಂದಿ ಗ್ರಾಮದ ಬನ್ನಿಮಹಾಂಕಾಳಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಭಾನುವಾರ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆಯಿದೆ.
ದೇವಸ್ಥಾನಕ್ಕೆ ಬಣ್ಣ ಬಳಿದು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದೇವರ ಮೂರ್ತಿಗಳ ಆಭರಣಗಳನ್ನು ಅರ್ಚಕರು ಸ್ವಚ್ಛಗೊಳಿಸಿದರು. ದೇವಸ್ಥಾನದ ಮುಂದೆ ಬ್ಯಾರಿಕೇಡ್ ಇಡಲಾಗಿದೆ.
ಪೌರಾಣಿಕ ಹಿನ್ನೆಲೆ: ‘ಬನ್ನಿ ಮಹಾಂಕಾಳಿ ದೇವಸ್ಥಾನ ಮೊದಲು ಗುಡ್ಡದ ಮೇಲೆ ಇತ್ತು. ದೊರೆ ಚಂದ್ರಹಾಸ ಈ ದೇವಾಲಯ ನಿರ್ಮಾಣ ಮಾಡಿದ್ದನು. ಬೆಟ್ಟದ ಮೇಲೆ ಗಿಡ, ಪೊದೆ ಬೆಳೆದು ದೇವಾಲಯಕ್ಕೆ ಹೋಗುವ ಮಾರ್ಗ ಮುಚ್ಚಿಹೋಗಿತ್ತು. ಇದರಿಂದ ದೇವಸ್ಥಾನಕ್ಕೆ ತೆರಳುವ ಭಕ್ತರ ಸಂಖ್ಯೆಯೂ ಇಳಿಮುಖವಾಯಿತು’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ವೀರೇಶ ಹೇಳುತ್ತಾರೆ.
‘ಇದರಿಂದಾಗಿ, ದೇವಿಯ ಮೂರ್ತಿಯನ್ನು 1985ರಲ್ಲಿ ಬೆಟ್ಟದ ಮೇಲಿಂದ ಕೆಳಗೆ ತಂದು, ಈಗಿನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ದೇವಸ್ಥಾನ ಅಭಿವೃದ್ಧಿ ಜೊತೆಗೆ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ’ ಎಂದರು.
3-5 ವರ್ಷಕ್ಕೊಮ್ಮೆ ಕುಂಭೋತ್ಸವ: ಗ್ರಾಮದಲ್ಲಿ ಒಂದು ವೇಳೆ ಸಮರ್ಪಕವಾಗಿ ಮಳೆಯಾಗದೆ, ಬೆಳೆ ಸರಿಯಾಗಿ ಬಾರದಿದ್ದಲ್ಲಿ ಐದು ವರ್ಷಕ್ಕೊಮ್ಮೆ ಊರ ದೇವರ ಮಾದರಿಯಲ್ಲಿ ಕುಂಭೋತ್ಸವ ಆಚರಿಸಲಾಗುತ್ತದೆ. ಬೆಳೆ ಚೆನ್ನಾಗಿ ಬಂದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಕುಂಭೋತ್ಸವ ಆಚರಿಸಲಾಗುತ್ತದೆ. ಅಮೃತ ಅಮಾವಾಸ್ಯೆಯಂದು ನಡೆಯುವ ದೇವಿ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.
ಈ ದೇವಸ್ಥಾನದ ಮುಂಭಾಗದ ಬನ್ನಿಮರದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಇಟ್ಟು ಕಾಡಿಗೆ ತೆರಳಿದರೆಂಬ ನಂಬಿಕೆ ಇದೆ. ಇದು ಧಾರ್ಮಿಕ ದತ್ತಿ ಇಲಾಖೆಯ ಪ್ರಮುಖ ದೇವಸ್ಥಾನವಾಗಿದ್ದು, ಸೆಲ್ವಮಣಿ ಟಿ ಅವರು ಬಳ್ಳಾರಿಯ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.
ರಾಜಧಾನಿಯಾಗಿದ್ದ ಬಲಕುಂದಿ’ ಸಿರುಗುಪ್ಪ ತಾಲ್ಲೂಕಿನ ಬಲಕುಂದಿಯು ಐತಿಹಾಸಿಕ ಪೌರಾಣಿಕ ಹಿನ್ನೆಲೆಯುಳ್ಳ ಗ್ರಾಮವಾಗಿದೆ. ‘ಬಲ್ಲಕುಂದಿ 300’ ‘ಕುಂತಳ ನಗರ’ ಎಂದು ಕರೆಸಿಕೊಳ್ಳುತ್ತಿದ್ದ ಗ್ರಾಮವು ಚಂದ್ರಹಾಸನ ರಾಜಧಾನಿ ಆಗಿತ್ತು. ಇಲ್ಲಿ ನೆಲೆಸಿದ್ದ ಚಂದ್ರಹಾಸ ದೊರೆ 80 ಊರುಗಳ ರಾಜನಾಗಿದ್ದನು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.