ADVERTISEMENT

ಮೂರುವರೆ ತಾಸು ತಡವಾದ ರೈಲು: ನೀಟ್‌ ಪರೀಕ್ಷೆಗೆ ಗೈರು, ರೈಲ್ವೆ ಸಚಿವರಿಗೆ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 5 ಮೇ 2019, 13:01 IST
Last Updated 5 ಮೇ 2019, 13:01 IST
   

ಹೊಸಪೇಟೆ: ‘ಹಂಪಿ ಎಕ್ಸಪ್ರೆಸ್‌’ ರೈಲು (ಗಾಡಿ ಸಂಖ್ಯೆ 16591) ವಿಳಂಬವಾಗಿ ಬೆಂಗಳೂರು ತಲುಪಿದ್ದರಿಂದ ಬಳ್ಳಾರಿ, ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ (ನೀಟ್‌) ಗೈರಾಗಿದ್ದಾರೆ.

ಶನಿವಾರ ರಾತ್ರಿ 9.15ಕ್ಕೆ ಹೊಸಪೇಟೆಗೆ ಬರಬೇಕಿದ್ದ ರೈಲು ರಾತ್ರಿ 12.45ಕ್ಕೆ ಬಂದಿದೆ. ತಡರಾತ್ರಿ 2ಗಂಟೆಗೆ ಬಳ್ಳಾರಿ ಮೂಲಕಪಯಣ ಬೆಳೆಸಿದೆ. ಭಾನುವಾರ ಬೆಳಿಗ್ಗೆ ಏಳು ಗಂಟೆಗೆ ರೈಲು ಅರಸೀಕೆರೆ ರೈಲು ನಿಲ್ದಾಣ ತಲುಪಿತ್ತು. ವಿಷಯ ತಿಳಿದು ವಿದ್ಯಾರ್ಥಿಯೊಬ್ಬ ರೈಲ್ವೆ ಸಚಿವರಿಗೆ ಟ್ವೀಟ್‌ ಮಾಡಿದ್ದಾನೆ.

‘ಬೆಂಗಳೂರಿನಲ್ಲಿ ನೀಟ್‌ ಪರೀಕ್ಷೆ ಬರೆಯಲು ಹಂಪಿ ಎಕ್ಸಪ್ರೆಸ್‌ ರೈಲಿನ ಮೂಲಕ ಬರುತ್ತಿದ್ದೇವೆ. ಈಗ ಸಮಯ ಬೆಳಿಗ್ಗೆ ಏಳು ಗಂಟೆ. ಬೆಂಗಳೂರು ತಲುಪಲು ಇನ್ನೂ 180 ಕಿ.ಮೀ. ಕ್ರಮಿಸಬೇಕಿದೆ’ ಎಂದು ಸಾಯಿ ಶ್ರೀನಿವಾಸ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

ರೈಲಿನಲ್ಲಿ ಬಳ್ಳಾರಿ, ಕೊಪ್ಪಳ ಹಾಗೂ ಹುಬ್ಬಳ್ಳಿ ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದೆ. ಆದರೆ, ವಿದ್ಯಾರ್ಥಿಗಳ ನಿಖರ ಸಂಖ್ಯೆ ತಿಳಿದು ಬಂದಿಲ್ಲ. ಪ್ರತಿದಿನ ಸಂಜೆ ಆರು ಗಂಟೆಗೆ ಹುಬ್ಬಳ್ಳಿಯಿಂದ ಪಯಣ ಬೆಳೆಸುವ ರೈಲು ಮರುದಿನ ಆರು ಗಂಟೆಗೆ ಬೆಂಗಳೂರು ತಲುಪುತ್ತದೆ.

‘ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಈ ರೀತಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಪರೀಕ್ಷೆ ನಿಗದಿಯಾದ ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಹೋಗಬೇಕಿತ್ತು’ ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.