ADVERTISEMENT

ಅಪಘಾತಕ್ಕೀಡಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಮಾನವೀಯತೆ ತೋರಿ...

ಟಿ.ವಿ.ಕ್ಯಾಮರಾಮಾನ್‌ ದುರ್ಗೇಶ್‌ ನೆರವು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 17:49 IST
Last Updated 3 ಸೆಪ್ಟೆಂಬರ್ 2018, 17:49 IST
ಗಾಯಾಳುವಿಗೆ ನೆರವಾದ ಕ್ಯಾಮರಾಮನ್‌ ದುರ್ಗೇಶ್‌
ಗಾಯಾಳುವಿಗೆ ನೆರವಾದ ಕ್ಯಾಮರಾಮನ್‌ ದುರ್ಗೇಶ್‌   

ಬಳ್ಳಾರಿ: ನಗರದ ಕನಕದುರ್ಗಮ್ಮ ಗುಡಿ ಬಳಿಯ ರೈಲು ಕೆಳಸೇತುವೆ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಅಪಘಾತಕ್ಕೀಡಾದ ಆಟೋರಿಕ್ಷಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೇತಾಡುತ್ತಿದ್ದ ಚಾಲಕರೊಬ್ಬರನ್ನು ರಾಜ್‌ ನ್ಯೂಸ್‌ ವಾಹಿನಿಯ ಕ್ಯಾಮರಾಮನ್‌ ದುರ್ಗೇಶ್‌ ಕೆಳಕ್ಕೆ ಇಳಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿ ಮಾನವೀಯತೆ ಮೆರೆದರು.

ಬೆಳಿಗ್ಗೆ 7.30ರ ವೇಳೆಗೆ ಪ್ರಯಾಣಿಕರ ಆಟೋರಿಕ್ಷಾ ಮತ್ತು ಮಿನಿ ಸರಕು ಸಾಗಣೆ ವಾಹನದ ನಡುವೆ ಡಿಕ್ಕಿಯಾಗಿ ಆಟೋರಿಕ್ಷಾ ಚಾಲಕ ತೀವ್ರವಾಗಿ ಗಾಯಗೊಂಡರು. ಡಿಕ್ಕಿಯ ರಭಸಕ್ಕೆ ರಿಕ್ಷಾ ಮುಂಭಾಗದ ಗಾಜು ಪೂರ್ಣ ಒಡೆದು ಚಾಲಕ ಹೊರಕ್ಕೆ ಚಿಮ್ಮಿ ನೇತಾಡುತ್ತಿದ್ದರು.

ಸ್ಥಳದಲ್ಲಿದ್ದ ಬಹುತೇಕರು ಚಾಲಕರ ನೆರವಿಗೆ ಬಾರದೆ ದೃಶ್ಯವನ್ನು ಮೊಬೈಲ್‌ಫೋನ್‌ಗಳಲ್ಲಿ ಚಿತ್ರೀಕರಿಸುತ್ತಿದ್ದರು. ಕುಡುತಿನಿ ಪಟ್ಟಣ ಪಂಚಾಯ್ತಿ ಮತ ಎಣಿಕೆ ವರದಿಗಾರಿಕೆಗಾಗಿ ತಹಶೀಲ್ದಾರ್ ಕಚೇರಿಗೆ ಅದೇ ರಸ್ತೆ ಮೂಲಕ ತೆರಳುತ್ತಿದ್ದ ದುರ್ಗೇಶ್‌, ಕೂಡಲೇ ಅಲ್ಲಿದ್ದವರ ನೆರವಿನಿಂದ ಚಾಲಕರನ್ನು ರಿಕ್ಷಾದಿಂದ ಕೆಳಕ್ಕೆ ಇಳಿಸಿದರು. ಮತ್ತೊಂದು ಆಟೋರಿಕ್ಷಾದಲ್ಲಿ ಅವರನ್ನು ಕುಳ್ಳಿರಿಸಿ ಸಂಚಾರಿ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರ ಮೂಲಕ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಿದರು.

ADVERTISEMENT

‘ಗಾಯಾಳು ಕ್ಷೇಮವಾಗಿದ್ದಾರೆ ಎಂದು ವಿಮ್ಸ್‌ ವೈದ್ಯರು ತಿಳಿಸಿದರು. ಚಾಲಕರ ಮಾಹಿತಿ ತಿಳಿದಿಲ್ಲ’ ಎಂದು ದುರ್ಗೇಶ್‌ ಹೇಳಿದರು. ಈ ಅಪಘಾತ ಪ್ರಕರಣ ದಾಖಲಾಗಿಲ್ಲ ಎಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.