ಕೂಡ್ಲಿಗಿ: ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ತರಕಾರಿ, ಸೊಪ್ಪಿನ ದರ ಗಗನಕ್ಕೇರಿದ್ದು ಗ್ರಾಹಕರು ಖರೀದಿ ಅನಿವಾರ್ಯ ಎನಿಸಿ ಚಿಂತೆಯಲ್ಲಿಯೇ ಸಂತೆಯನ್ನು ಮುಗಿಸುವಂತಾಗಿದೆ.
ಪ್ರತಿ ಶುಕ್ರವಾರ ಪಟ್ಟಣದಲ್ಲಿ ವಾರದ ಸಂತೆ ನಡೆಯುತ್ತಿದ್ದು, ಬೇರೆ ಕಡೆಗಿಂತ ಇಲ್ಲಿನ ಸಂತೆಯಲ್ಲಿ ತರಕಾರಿಗಳ ಬೆಲೆ ಸಮಾನ್ಯವಾಗಿ ತರಕಾರಿ ಬೆಲೆ ₹ 40 ರಿಂದ ₹ 60 ಇರುತ್ತದೆ. ಆದರೆ ಕಳೆದ ಎರಡು ವಾರಗಳಿಂದ ಬೆಲೆ ಏರು ಮುಖದಲ್ಲಿರುವ ತರಕಾರಿ ಈ ವಾರ ನೂರರ ಗಡಿ ದಾಟಿದೆ.
ಕೆಜಿ ಹಸಿ ಮೆಣಸಿಕಾಯಿ ₹ 100, ಬೆಳ್ಳುಳ್ಳಿ ₹ 120 ರಿಂದ ₹ 140, ಹಿರೇಕಾಯಿ ₹ 100, ಟೊಮೊಟೊ ₹ 100 ರಿಂದ ₹ 120, ಕ್ಯಾರೆಟ್ ₹ 80, ಬದನೆ ಕಾಯಿ ₹ 80, ಬೆಂಡೆ ಕಾಯಿ ₹ 80ರಿಂದ ₹ 90, ಜವಳಿಕಾಯಿ ₹ 60, ಬೀನ್ಸ್ ₹ 80 ದರ ಇತ್ತು. ಬೆಲೆ ಹೆಚ್ಚು ಎಂದು ಕಡಿಮೆ ಸಾಕು ಎಂದು ಕಾಲು ಕೆಜಿ ಕೊಳ್ಳುವವರಿಗೂ ಬಿಸಿ ಮುಟಿತ್ತು.
100 ಕೆಜಿ ತರಕಾರಿಯನ್ನು ಕಾಲು ಕೆಜಿ ಲೆಕ್ಕದಲ್ಲಿ ಖರೀದಿ ಮಾಡಿದರೆ ₹ 30 ರೂಪಾಯಿ ಮಾರಾಟ ಮಾಡುತ್ತಿದ್ದ ಕಂಡು ಬಂದಿತು. ಎಲ್ಲಾ ಬಗೆಯ ಸೊಪ್ಪಿನ ಬೆಲೆ ಒಂದು ಕಟ್ಟು ₹ 10, ಮೂರು ಕೊಂಡರೆ ₹ 20 ದರ ನಿಗದಿಯಾಗಿತ್ತು. ಯಾವುದರಲ್ಲಿಯೂ ಚೌಕಾಸಿ ಮಾಡುವಂತಿಲ್ಲ. ಇದರಿಂದ ಗ್ರಾಹಕರು ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿದ್ದರು.
‘ಬೆಲೆ ಎರಿಕೆಯಿಂದ ತರಕಾರಿ ಕೊಂಡುಕೊಳ್ಳುವುದು ದುಸ್ತರವಾಗಿದೆ. ಅಗತ್ಯವಾದ ತರಕಾರಿಗಳನ್ನು ಮಾತ್ರ ಕೊಂಡುಕೊಳ್ಳಲು ಬಂದಿದ್ದೇನೆ’ ಎಂದು ಗ್ರಾಹಕ ಕೆ.ಎಂ. ವೀರೇಶ್ ಹೇಳಿದರು.
‘ಬೆಲೆ ಏರಿಕೆಯಿಂದ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ರೈತರಿಂದ ಕೊಂಡ ತರಕಾರಿಯನ್ನು ಹೇಗೆ ಮಾರಾಟ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿ ಚೌಡಪ್ಪ ಅಲವತ್ತುಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.