ADVERTISEMENT

ಹೊಸಪೇಟೆ: ದಿನವಿಡೀ ಸುರಿದ ಜಿಟಿಜಿಟಿ ಮಳೆ

ತುಂಗಭದ್ರಾ ಅಣೆಕಟ್ಟೆಗೆ ನಿತ್ಯ 3ರಿಂದ 4 ಟಿಎಂಸಿ ಅಡಿ ನೀರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 13:27 IST
Last Updated 22 ಜುಲೈ 2021, 13:27 IST
ಹೊಸಪೇಟೆಯಲ್ಲಿ ಗುರುವಾರ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಮಳೆಯ ನಡುವೆಯೇ ನಗರದ ಬಸ್‌ ನಿಲ್ದಾಣ ರಸ್ತೆಯಲ್ಲಿ ಚಮ್ಮಾರರೊಬ್ಬರು ಛತ್ರಿ ಹಿಡಿದುಕೊಂಡು ಕುಳಿತಿದ್ದರು
ಹೊಸಪೇಟೆಯಲ್ಲಿ ಗುರುವಾರ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಮಳೆಯ ನಡುವೆಯೇ ನಗರದ ಬಸ್‌ ನಿಲ್ದಾಣ ರಸ್ತೆಯಲ್ಲಿ ಚಮ್ಮಾರರೊಬ್ಬರು ಛತ್ರಿ ಹಿಡಿದುಕೊಂಡು ಕುಳಿತಿದ್ದರು   

ಹೊಸಪೇಟೆ (ವಿಜಯನಗರ): ಜಿಲ್ಲೆಯ ಹಲವೆಡೆ ಗುರುವಾರ ದಿನವಿಡೀ ಜಿಟಿಜಿಟಿ ಮಳೆಯಾಗಿದೆ.

ಬೆಳಿಗ್ಗೆಯಿಂದ ಕಾರ್ಮೋಡ ಕವಿದಿತ್ತು. ಅನಂತರ ಆರಂಭಗೊಂಡ ಜಿಟಿಜಿಟಿ ಮಳೆ ಬಿಟ್ಟು ಬಿಟ್ಟು ದಿನವಿಡೀ ಸುರಿಯಿತು. ದಿನವಿಡೀ ಮೋಡ ಮುಚ್ಚಿಕೊಂಡು ಮಳೆಯಾಗಿದ್ದರಿಂದ ವಾತಾವರಣ ಸಂಪೂರ್ಣ ತಂಪಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ವಿರಳವಾಗಿತ್ತು.

ಜಿಲ್ಲೆಯ ಹೊಸಪೇಟೆ, ಮರಿಯಮ್ಮನಹಳ್ಳಿ, ಕೂಡ್ಲಿಗಿ, ಕಾನಹೊಸಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿಯ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಎರಡು ದಿನ ಬಿಡುವು ಕೊಟ್ಟಿದ್ದ ಮಳೆ ಗುರುವಾರದಿಂದ ಪುನಃ ಆರಂಭಗೊಂಡಿರುವುದಕ್ಕೆ ರೈತರು ಸಂತಸಗೊಂಡಿದ್ದಾರೆ.

ADVERTISEMENT

ನಿತ್ಯ 3ರಿಂದ 4 ಟಿಎಂಸಿ ನೀರು:

ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದೆ.

ಕಳೆದ ನಾಲ್ಕು ದಿನಗಳಿಂದ ಅಣೆಕಟ್ಟೆಗೆ ನಿತ್ಯ ಸರಾಸರಿ ಮೂರರಿಂದ ನಾಲ್ಕು ಟಿಎಂಸಿ ಅಡಿ ನೀರು ಬರುತ್ತಿದೆ. 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರಕ್ಕೆ 62 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 40,862 ಕ್ಯುಸೆಕ್‌ ಒಳಹರಿವು ಇದೆ. 3,472 ಕ್ಯುಸೆಕ್‌ ನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ. ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ ಹತ್ತು ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.