ಹೊಸಪೇಟೆ (ವಿಜಯನಗರ): ಅರಣ್ಯ ಇಲಾಖೆಯಿಂದ ಸೋಮವಾರ ತಾಲ್ಲೂಕಿನ ಕಮಲಾಪುರದಲ್ಲಿ 67ನೇ ವನ್ಯಜೀವಿ ಸಪ್ತಾಹ ಆಚರಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪೂರೆ ಅವರು ಕಮಲಾಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ವನ್ಯಜೀವಿಗಳ ಮಹತ್ವ ಸಾರುವ ಜಾಥಾಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಪ್ರಕೃತಿ ನಿಸರ್ಗ ಧಾಮದಲ್ಲಿ ಛಾಯಾಚಿತ್ರ ಪ್ರದರ್ಶನ, ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿ, ‘ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಹೊಣೆ. ಜೀವ ವೈವಿಧ್ಯ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಕೂಡ ಹೌದು’ ಎಂದು ಹೇಳಿದರು.
‘ಅವಿಭಜಿತ ಬಳ್ಳಾರಿ ಜಿಲ್ಲೆ ಎಂದರೆ ಬರೀ ಉರಿ ಬಿಸಿಲು, ಬರಡು ಭೂಮಿ ಅಲ್ಲ. ದಟ್ಟವಾದ ಕಾಡು ಇದೆ. ಕರಡಿ, ಚಿರತೆ, ಗುಳ್ಳೇನರಿ, ಕಾಡು ಹಂದಿ ಸೇರಿದಂತೆ ಹಲವು ಜೀವ ಜಂತುಗಳಿವೆ. ಜಿಲ್ಲೆಯಲ್ಲಿ ಶೇ 20ರಷ್ಟು ಅರಣ್ಯ ಪ್ರದೇಶ ಇದೆ. ದರೋಜಿ ಕರಡಿಧಾಮ, ಗುಡೇಕೋಟೆ ಕರಡಿಧಾಮ, ಅಂಕಸಮುದ್ರ ಸಂರಕ್ಷಿತ ಪಕ್ಷಿಧಾಮ, 34 ಕಿ.ಮೀ ತುಂಗಾಭದ್ರಾ ನೀರುನಾಯಿ ಸಂರಕ್ಷಿತ ಪ್ರದೇಶ, ಸಿರುಗುಪ್ಪದಲ್ಲಿ ಅಳಿವಿನಂಚಿತ ಎರೆಬೂತ ಪಕ್ಷಿಗಳಿವೆ. ಹೀಗೆ ಇಡೀ ಜಿಲ್ಲೆ ಜೀವವೈವಿಧ್ಯದ ತಾಣವಾಗಿದೆ’ ಎಂದು ತಿಳಿಸಿದರು.
‘1970ರ ವರೆಗೆ ವನ್ಯಜೀವಿ ಸಂರಕ್ಷಣೆಗೆ ಯಾವುದೇ ಕಾಯ್ದೆ ಇರಲಿಲ್ಲ. ಸ್ವಾತಂತ್ರ್ಯದ ಪ್ರಾರಂಭದಲ್ಲಿ ಕಾಡು ಕಡಿದು ರೈತರಿಗೆ ಬದುಕು ಕಟ್ಟಿಕೊಳ್ಳಲು ಜಮೀನು ಹಂಚಲಾಯಿತು. ಕಾಡು ಸಂರಕ್ಷಿಸಲು 1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರು’ ಎಂದು ಮಾಹಿತಿ ನೀಡಿದರು.
ಅಟಲ್ ಬಿಹಾರಿ ವಾಜಪೇಯಿ ಜೈವಿನ ಉದ್ಯಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ಕಿರಣ್ ಕುಮಾರ್, ವಲಯ ಅರಣ್ಯ ಅಧಿಕಾರಿ ಉಷಾ, ಪಕ್ಷಿ ತಜ್ಞರಾದ ಸಮದ್ ಕೊಟ್ಟೂರು, ಪಂಪಯ್ಯ ಸ್ವಾಮಿ ಮಳಿಮಠ, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ದೇವರಾಜ್ ಇದ್ದರು.
ಸಪ್ತಾಹದ ನಿಮಿತ್ತ ಏರ್ಪಡಿಸಿದ್ದ ಪ್ರಬಂಧ, ಚಿತ್ರಕಲೆ ಮತ್ತು ರಸ ಪ್ರಶ್ನೆಯಲ್ಲಿ ವಿಜೇತರಾದ 24 ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.