ADVERTISEMENT

ಅಣಕು ಶವಯಾತ್ರೆ: ರೈಲು ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 4:55 IST
Last Updated 1 ಅಕ್ಟೋಬರ್ 2012, 4:55 IST

ಆನೇಕಲ್: ಕಾವೇರಿ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕರ್ನಾಟಕದ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿವೆ ಎಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ನುಡಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಆದೇಶಿಸಿರುವುದನ್ನು ಖಂಡಿಸಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ತಾಲ್ಲೂಕಿನ ಹಾಲ್ದೇನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

ರಾಜ್ಯದ ಪರವಾಗಿ ವಕೀಲರು ಸಮರ್ಥ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ್ದಾಗ ಆಗಿನ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಜ್ಯದ ಹಿತ ಕಾಪಾಡಿದ್ದರು. ಆದರೆ ಇಂದಿನ ಸರ್ಕಾರ ರಾಜ್ಯದ ಹಿತ ಕಾಪಾಡಲು ಎಲ್ಲ ರೀತಿಯ ಹೋರಾಟ ನಡೆಸಬೇಕು ಎಂದರು.

ರಾಜ್ಯದ ಜಲಾಶಯಗಳಲ್ಲಿ ಕೇವಲ 22 ಟಿಎಂಸಿ ನೀರು ಲಭ್ಯವಿದೆ. ರಾಜ್ಯಕ್ಕೆ 90 ಟಿಎಂಸಿ ನೀರಿನ ಅವಶ್ಯಕತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ವಸ್ತುಸ್ಥಿತಿಯ ಅರಿವಿಲ್ಲದೇ ಕಾವೇರಿ ನದಿ ಪ್ರಾಧಿಕಾರ ಹಾಗೂ ಸರ್ವೋಚ್ಚ ನ್ಯಾಯಾಲಯ ತಮಿಳುನಾಡಿಗೆ ನೀರು ಬಿಡುವಂತೆ ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಶಿವಸುಬ್ರಮಣಿ, ಡಿ.ಕೆ.ಬಷೀರ್, ಕೊಡಲಿಪುರ ನಾರಾಯಣ ಸ್ವಾಮಿ, ಕೋದಂಡ ಮೂರ್ತಿ, ಮೂರ್ತಿ, ಗುಡ್ಡಟ್ಟಿ ರಾಜು, ನಾಗಮಣಿ, ಮಂಜುನಾಥ ಬಳಿಗಾರನಹಳ್ಳಿ, ಕೋದಂಡರಾಮ, ವಿಷ್ಣು ಸೇನಾ ಸಮೀತಿಯ ಶ್ರಿನಿವಾಸ್, ಕೆ.ಶ್ರಿನಿವಾಸ್, ಅಕ್ಷಯ ಗೌಡ, ಸತೀಶ್‌ರಾಜ್ ಇತರರು ಹಾಜರಿದ್ದರು.

ಕರವೇ (ಪ್ರವೀಣ್ ಶೆಟ್ಟಿ ಬಣ) ಪ್ರತಿಭಟನೆ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಮಿಳುನಾಡಿನ ತಾಳಕ್ಕೆ ತಕ್ಕಂತೆ ಕುಣಿದು ರಾಜ್ಯದ ಹಿತವನ್ನು ಬಲಿಕೊಟ್ಟಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಘಟಕದ ಉಪಾಧ್ಯಕ್ಷ ಆರ್.ಪುನೀತ್ ಟೀಕಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ಖಂಡಿಸಿ ಸಂಘಟನೆ ವತಿಯಿಂದ ಆನೇಕಲ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಪಟ್ಟಣದ ದೇವರ ಕೊಂಡಪ್ಪ ವೃತ್ತದಿಂದ ಬಸ್ ನಿಲ್ದಾಣದವರೆಗೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿಯ ಅಣುಕು ಶವಯಾತ್ರೆ ಮಾಡಿ ಪ್ರತಿಭಟಿಸಿದರು.

ಕರವೇ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ, ಮೋಹನ್, ಮಹೇಶ್, ಸುನಿಲ್, ಮಂಜು, ಬಾನು ಪ್ರಕಾಶ್, ಸಂಪಂಗಿ, ನವೀನ್, ರಾಜು, ಮಾರಪ್ಪ, ರೆಡ್ಡಿ, ಸೀನು, ಜನಾರ್ದನ್, ರಘು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.