ADVERTISEMENT

ಅಮಾನಿ ಕೆರೆ ಒತ್ತುವರಿ ತೆರವು : 21 ರೈತರ ವಿರುದ್ಧ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 10 ಮೇ 2012, 5:25 IST
Last Updated 10 ಮೇ 2012, 5:25 IST

ವಿಜಯಪುರ: ಚನ್ನರಾಯಪಟ್ಟಣದ ಅಮಾನಿ ಕೆರೆಯ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಬುಧವಾರ ಆರಂಭಿಸಲಾಯಿತು.

ಕೆರೆಯ ಒತ್ತುವರಿ ಕುರಿತಂತೆ `ಪ್ರಜಾವಾಣಿ~ಯ ಬುಧವಾರದ (ಮೇ 9) ಸಂಚಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಲ್.ಸಿ. ನಾಗರಾಜ್ ತಕ್ಷಣದ ಕ್ರಮಕ್ಕೆ ಮುಂದಾದರು.

ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಅವರು, ಒತ್ತುವರಿ ಮಾಡಿಕೊಂಡಿದ್ದ ಕೆರೆ ಜಾಗದಲ್ಲಿ ಬೆಳೆಯಲಾಗಿದ್ದ ಬೆಳೆಯನ್ನು ನಾಶಪಡಿಸಲು ಅಧಿಕಾರಿಗಳಿಗೆ ಆದೇಶಿಸಿದರು. ಟ್ರ್ಯಾಕ್ಟರ್ ಮೂಲಕ ಬೆಳೆ ನಾಶಪಡಿಸಲಾಯಿತು. ಗುರುವಾರ ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ಮುಂದುರಿಸಲಾಗುವುದು. ಕಂದಕ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಒತ್ತುವರಿ ಮಾಡಿಕೊಂಡಿರುವ ರೈತರಿಗೆ 2 ತಿಂಗಳ ಹಿಂದೆಯೇ ನೊಟೀಸ್ ನೀಡಲಾಗಿದೆ. ಅವರ ವಿರುದ್ಧ ಕಾನೂನು ಪ್ರಕಾರ ಮೊಕದ್ದಮೆ ಹೂಡಲಾಗುವುದು. ಯಾವುದೇ ಒತ್ತಡ ಬಂದರೂ ಒತ್ತುವರಿ ತೆರವಿನ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಒಂದು ವೇಳೆ ಜಮೀನು ತಮಗೇ ಸೇರಿದ್ದು ಎನ್ನುವಂತಹ ರೈತರು ಕಾನೂನಿನ ಮೊರೆಹೋಗಬಹುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್, ಕಂದಾಯಾಧಿಕಾರಿ ಲಿಂಗಪ್ಪಬಸಪ್ಪ, ಸೋಮತ್ತನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಶೆಟ್ಟಿ, ಚನ್ನರಾಯಪಟ್ಟಣ ಗ್ರಾಮ ಲೆಕ್ಕಾಧಿಕಾರಿ ವೇಣುಗೋಪಾಲ್, ಕಂದಾಯಾಧಿಕಾರಿ ಸಹಾಯಕ ವೆಂಕಟೇಶ್ ಇತರರು ಉಪಸ್ಥಿತರಿದ್ದರು.

ಒತ್ತುವರಿ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಚನ್ನರಾಯಪಟ್ಟಣ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.