ADVERTISEMENT

`ಏಡ್ಸ್ ಪೀಡಿತರ ನಿರ್ಲಕ್ಷ್ಯ ಸಲ್ಲ~

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST

ದೇವನಹಳ್ಳಿ: `ಏಡ್ಸ್ ಪೀಡಿತರನ್ನು ನಿರ್ಲಕ್ಷ್ಯ ಮಾಡದೆ, ಅವರಲ್ಲಿ ಆತ್ಮಸ್ಥೈರ್ಯ ಬೆಳೆಸಬೇಕು~ ಎಂದು ತಾಲ್ಲೂಕು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಹಿರಿಯ ವೈದ್ಯ ಡಾ.ಶ್ರೀನಿವಾಸ್ ತಿಳಿಸಿದರು.

ದೇವನಹಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಅಖಿಲ ಕರ್ನಾಟಕ ಡಾ.ಬಿ.ಆರ್.ಅಂಬೇಡ್ಕರ್ ಯುವ ಶಕ್ತಿ ಸಂಘ ಹಾಗೂ ಆಟೋ ಚಾಲಕರ ಸಂಘ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ `ಏಡ್ಸ್ ಬಗ್ಗೆ ಅರಿತು ಅರಿವು ಮೂಡಿಸಿ~ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದಿನ ಜನ್ಮದಲ್ಲಿ ಮಾಡಿದ ಪಾಪದಿಂದ ಮಾರಕ ರೋಗಗಳು ಬರುತ್ತವೆ ಎನ್ನುವ ನಂಬಿಕೆ ಸುಳ್ಳು. ಅಂತಹ ಮೂಢನಂಬಿಕೆಗಳು ಜನರಿಂದ ದೂರಾಗಬೇಕು. ಅಸುರಕ್ಷಿತ ಲೈಂಗಿಕ ಕ್ರಿಯೆ, ಮಾದಕ ಡ್ರಗ್ಸ್, ಏಡ್ಸ್ ಪೀಡಿತರ ರಕ್ತದಿಂದ ಬೇರೆಯವರಿಗೆ ರಕ್ತ ನೀಡುವ ಸಂದರ್ಭದಲ್ಲಿ ಮಾತ್ರ ಸೋಂಕು ಬೇರೆಯವರಿಗೆ ಹರಡುತ್ತದೆ.

ADVERTISEMENT

ಏಡ್ಸ್ ರೋಗಿಗಳ ಜೊತೆಯಲ್ಲಿ ಊಟಮಾಡುವುದು, ವಾಸ ಮಾಡುವುದು ಸೇರಿದಂತೆ ರೋಗಿಗಳ ಹೊದಿಕೆ ಉಪಯೋಗಿಸುವುದರಿಂದ ಏಡ್ಸ್ ಬರುವುದಿಲ್ಲ. ರೋಗ ಪೀಡಿತರಿಗೆ ಆಪ್ತ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿ ಉಚಿತ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದರು.

ಪೊಲೀಸ್ ಉಪಾಯುಕ್ತ ಎಂ.ಸಿ.ಬೂದಿಹಾಳ್ ಮಾತನಾಡಿ, ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಎಚ್.ಐ.ವಿ ಸೋಂಕು ಕಾಣಿಸಿಕೊಂಡಿರುವುದು ಕಳವಳಕಾರಿ ಸಂಗತಿ. ಉತ್ತಮ ಅಹಾರ, ದೈಹಿಕ ಚಟುವಟಿಕೆ ಹಾಗೂ ಧ್ಯಾನದಿಂದ ರೋಗದಿಂದ ನಿಯಂತ್ರಣ ಸಾಧಿಸಬಹುದು ಎಂದರು.ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರಥಮ ಏಡ್ಸ್ ಪೀಡಿತೆ ದಿ.ವೀಣಾಧರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.


ಡಾ.ಬಿ.ಆರ್.ಅಂಬೇಡ್ಕರ್ ಯುವ ಶಕ್ತಿ ಸಂಘ ರಾಜ್ಯ ಘಟಕದ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿದರು. ಮಾನಸ ಆಸ್ಪತ್ರೆ ವೈದ್ಯ ಡಾ.ನರಸಾ ರೆಡ್ಡಿ, ಭಾರತ ಜನಜಾಗೃತಿ ಸೇನೆ, ರಾಜ್ಯ ಘಟಕದ ಕಾರ್ಯದರ್ಶಿ ಎಂ.ನಾಗರಾಜ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.