ದೊಡ್ಡಬಳ್ಳಾಪುರ: ಕನ್ನಡಮ್ಮನ ಉಳಿವಿಗಾಗಿ ಮಾಡಿದ ಗೋಕಾಕ್ ಚಳವಳಿಯ ವೇಳೆ ಗೋಕಾಕ್ ಗೋ ಬ್ಯಾಕ್ ಎಂದು ಧಿಕ್ಕಾರ ಕೂಗಿದ ಪಟ್ಟಭದ್ರ ಹಿತಾಸಕ್ತಿಗಳು ಇಂದು ನಾಡು, ನುಡಿ ಎನ್ನುತ್ತಾ ಕನ್ನಡಕ್ಕಾಗಿ ದುಡಿದವರಂತೆ ಗಣ್ಯ ಸಾಹಿತಿಗಳ ಪಟ್ಟಿಯಲ್ಲಿರುವುದು ನಾಡಿನ ದೌರ್ಭಾಗ್ಯ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ಮ.ಲ.ನ ಮೂರ್ತಿ ಹೇಳಿದರು.
ತಾಲ್ಲೂಕಿನ ಆರೂಢಿಯಲ್ಲಿ ಜೈ ಭುವನೇಶ್ವರಿ ಆಟೋ ಚಾಲಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
‘ಆಧುನಿಕತೆ ಹೆಚ್ಚಾದಂತೆ ಕನ್ನಡ ಶಾಲೆಗಳ ಬಗ್ಗೆ ಪೋಷಕರು ಸೇರಿದಂತೆ ಸ್ವತಃ ಸರ್ಕಾರಿ ಶಾಲೆಯ ಶಿಕ್ಷಕರಲ್ಲಿಯೂ ಕನ್ನಡ ಶಾಲೆಗಳ ಬಗ್ಗೆ ಅಸಡ್ಡೆಯ ನಿಲುವು ಬೆಳೆಯುತ್ತಿರುವುದು ಆತಂಕಕಾರಿ ವಿಷಯ. ನನ್ನ ಕರ್ಮಭೂಮಿಯಾದ ಆರೂಢಿ ಅರವಿಂದ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕೆಲವರಿಗೆ ಸರ್ಕಾರಿ ಕನ್ನಡ ಶಾಲೆಗಳೆಂದರೆ ವಿರಕ್ತಿ ಉಂಟಾಗಲು ಕಾರಣವೇನು ಎಂಬುದನ್ನು ಸ್ವತಃ ಮನನ ಮಾಡಿಕೊಳ್ಳಬೇಕು’ ಎಂದರು.
ಅರವಿಂದ ಶಾಲೆಯ ಮುಖ್ಯಶಿಕ್ಷಕ ಸುದರ್ಶನಬಾಬು, ಸರ್ಕಾರಿ ಹಿರಿಯ ಪಾಠ ಶಾಲೆ ಪ್ರಭಾರಿ ಮುಖ್ಯಶಿಕ್ಷಕ ವಿನಯ್ಕುಮಾರ್, ಮುಖಂಡರಾದ ನರಸೀಯಪ್ಪ, ಸಹಶಿಕ್ಷಕರಾದ ನರಸಿಂಹಮೂರ್ತಿ,ಗೋಪಾಲ್ನಾಯಕ್ ಹಾಜರಿದ್ದರು.
ನಿವೃತ್ತ ಮುಖ್ಯಶಿಕ್ಷಕ ಶಿವಪ್ರಕಾಶ್, ಸಹಶಿಕ್ಷಕರಾದ ವಿ.ವೆಂಕಟೇಶ್,ನಿವೃತ ಶಿಕ್ಷಕರಾದ ಡಿ.ವಿ.ಶಿವರುದ್ರಯ್ಯ, ಭೈರಪ್ಪರೆಡ್ಡಿ, ಕೆ.ಹನುಮಯ್ಯ, ನಾಗೇಂದ್ರಕುಮಾರ್, ಚಿಕ್ಕಣ್ಣ, ಸಹಾಯಕ ಮರಿಯಪ್ಪ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.