ವಿಜಯಪುರ: ಪ್ರತಿ ವಾರ್ಡಿಗೊಂದರಂತೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಎಸ್. ಮಂಜುನಾಥ್ ಮನವಿ ಸಲ್ಲಿಸಿದ್ದಾರೆ.
ಇಲ್ಲಿನ 23 ವಾರ್ಡುಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಇಲ್ಲಿನ ನೀರಿನ ಟ್ಯಾಂಕ್ ಬಳಿಯಲ್ಲಿ ಸ್ಥಾಪನೆ ಮಾಡಿರುವ ಒಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಹೊರತು ಪಡಿಸಿದರೆ ಬೇರೆ ಎಲ್ಲೂ ನೀರಿನ ಘಟಕಗಳು ಈವರೆಗೂ ಆರಂಭವಾಗಿಲ್ಲ.
ಪಟ್ಟಣದಲ್ಲಿ ಮೂರು ಕಡೆ ಕಾಮಗಾರಿ ಆರಂಭವಾಗಿದೆಯಾದರೂ ಇದುವರೆಗೂ ಪೂರ್ಣಗೊಂಡಿಲ್ಲ.
ಈಗಿರುವ ನೀರಿನ ಶುದ್ಧೀಕರಣ ಘಟಕದಲ್ಲಿ ಪ್ರತಿನಿತ್ಯ ಬೆಳಗ್ಗೆ ನೀರಿಗಾಗಿ ಎಲ್ಲಾ ವಾರ್ಡುಗಳಿಂದಲೂ ಜನರು ಸಾಲುಗಟ್ಟಿ ನಿಲ್ಲುವಂತಾಗಿದೆ. ವಿದ್ಯುತ್ ಇಲ್ಲದೆ ಹೋದರೆ ನೀರು ಬರುವುದಿಲ್ಲ. ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ. ಇದರಿಂದ ನೀರಿಗೆ ಬಂದ ಜನರು ವಾಪಸ್ ಹೋಗಿ ಪುನಃ ಸಂಜೆ ಸರದಿ ಸಾಲಿನಲ್ಲಿ ನಿಂತು ನೀರು ತೆಗೆದುಕೊಂಡು ಹೋಗಬೇಕಾಗಿದೆ. ಕೆಲವೊಮ್ಮೆ ₹5 ಚಿಲ್ಲರೆ ಕೊಡುವವರಿಲ್ಲ. ಆದ್ದರಿಂದ ಪರದಾಡುವಂತಹ ಸ್ಥಿತಿಯು ನಿರ್ಮಾಣವಾಗುತ್ತಿದೆ ಎಂದಿದ್ದಾರೆ.
ಇಲ್ಲಿನ ಜನಸಂಖ್ಯೆ ಆಧಾರದ ಮೇಲೆ ಒಂದು ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ಸರಬರಾಜು ಮಾಡುವುದು ಕಷ್ಟವಾಗುತ್ತಿದೆ. ಬೇಸಿಗೆಯಾಗಿರುವುದರಿಂದ ನೀರಿಗಾಗಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಸಾರ್ವಜನಿಕರು ಸರತಿ ಸಾಲಲ್ಲಿ ನಿಂತು ನೀರನ್ನು ಹಿಡಿಯಲು ಪರದಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಕೆಲವರು ಬೇರೆ ಕಡೆಗಳಿಂದ ಬರುವ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದವರು ಆಟೋಗಳು, ಟಾಟಾ ಏಸ್ಗಳಲ್ಲಿ ನೀರಿನ ಕ್ಯಾನುಗಳನ್ನು ತುಂಬಿಕೊಂಡು ಬಂದು ನೀರು ತೆಗೆದುಕೊಂಡು ಹೋಗಿ ಲಾಭಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳಾದ ಅಶೋಕ್ ಕುಮಾರ್, ರಾಮಾಂಜಿ, ನಾಗರಾಜ್, ಗುರುರಾಜ್ ಆರೋಪಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಶುದ್ಧೀಕರಣವಾಗುತ್ತಿಲ್ಲ ಎಂದೂ ಜನರು ಆರೋಪಿಸುತ್ತಿದ್ದಾರೆ. ಸಮಸ್ಯೆಯ
ಬಗ್ಗೆ ಅರಿವಿದ್ದರೂ ಪುರಸಭೆಯವರು ಈ ಬಗ್ಗೆ ಗಮನಹರಿಸಿಲ್ಲ. ಶಾಸಕರಿಗೆ ಮನವಿ ಕೊಟ್ಟಿದ್ದರೂ ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಮುಂದಾಗಿಲ್ಲವೆಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.