ರಾಮನಗರ: ‘ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಒಬ್ಬ ‘ಸುಸಂಸ್ಕೃತ (ಸೊಫಿಸ್ಟಿಕೇಟೆಡ್) ಕ್ರಿಮಿನಲ್’. ಅವರ ಬಳಿ ತರಬೇತಿ ಪಡೆದಿರುವ ಸಚಿವ ಡಿ.ಕೆ.ಶಿವಕುಮಾರ್ ಕೂಡಾ ಅವರಂತೆಯೇ ಸುಶಿಕ್ಷಿತ ಕ್ರಿಮಿನಲ್’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಪರ ಭಾನುವಾರ ರಾಮನಗರದಲ್ಲಿ ಪ್ರಚಾರ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಕೋಟ್ಯಂತರ ರೂಪಾಯಿ ಅವ್ಯವಹಾರ, ಅಕ್ರಮ, ಅಧಿಕಾರ ದುರ್ಬಳಕೆ, ನಿಸರ್ಗ ಸಂಪತ್ತಿನ ಲೂಟಿಯಲ್ಲಿ ತೊಡಗಿರುವ ಶಿವಕುಮಾರ್ ಹಾಗೂ ಅವರ ಪ್ರತಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಸಂಸದ ಡಿ.ಕೆ.ಸುರೇಶ್ ಅವರನ್ನು ಜೈಲಿಗೆ ಕಳುಹಿಸಿ, ಲೂಟಿಯಾಗಿರುವ ಹಣದ ಪ್ರತಿ ಪೈಸೆಯೂ ಸರ್ಕಾರಕ್ಕೆ ವಾಪಸಾಗುವ ತನಕ ಹೋರಾಟ ನಡೆಸುತ್ತೇನೆ’ ಎಂದು ಗುಡುಗಿದರು.
‘ಕನಕಪುರ ತಾಲ್ಲೂಕಿನ ಹಾರೋಹಳ್ಳಿ, ಕನಕಪುರ ಟೌನ್ ಹಾಗೂ ಸಾತನೂರಿನಲ್ಲಿ ನಾನು ಶನಿವಾರ ಪ್ರಚಾರ ನಡೆಸಿದೆ. ಇಲ್ಲೆಲ್ಲಾ ಡಿಕೆಶಿ ಸಹೋದರರ ತೋಳ್ಬಲ, ಅಧಿಕಾರ ದುರುಪಯೋಗ, ಹಣದ ಪ್ರಭಾವಗಳು ಕಣ್ಣಿಗೆ ರಾಚುವಂತಿತ್ತು. ಒಂದು ಕಾಲದಲ್ಲಿ ಬಳ್ಳಾರಿ ರಿಪಬ್ಲಿಕ್ನ ಜನರಲ್ಲಿ ಇದ್ದಂತಹುದೇ ಆತಂಕ, ಭಯ ಕನಕಪುರದ ಜನರಲ್ಲೂ ಗೋಚರಿಸಿತು. ಬಳ್ಳಾರಿ ರಿಪಬ್ಲಿಕ್ ರೀತಿಯಲ್ಲಿಯೇ ಕನಕಪುರ ರಿಪಬ್ಲಿಕ್ಗೂ ತಾರ್ಕಿಕ ಅಂತ್ಯ ಕಾಣಿಸುವ ತನಕ ನಾನು ವಿರಮಿಸುವುದಿಲ್ಲ’ ಎಂದು ಅವರು ವಿವರಿಸಿದರು.
‘ಈಗಾಗಲೇ ಶಿವಕುಮಾರ್ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದ 391 ಪುಟಗಳ ದಾಖಲೆಯನ್ನು ರಾಜ್ಯಪಾಲರಿಗೆ ನೀಡಲಾಗಿತ್ತು. ಕ್ರಮಕ್ಕಾಗಿ ತಿಂಗಳ ಗಡುವು ಕೊಡಲಾಗಿತ್ತು. ಆ ಗಡುವು ಈಗ ಮುಗಿದಿದೆ. ಈ ದಾಖಲೆಗಳನ್ನೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ಗೆ ಕಳುಹಿಸಿಕೊಡಲಾಗುವುದು. ಅಲ್ಲೂ ಪ್ರಯೋಜವಾಗದಿದ್ದರೆ, ಸುಪ್ರೀಂಕೋರ್ಟ್ನಲ್ಲಿ ಕಾನೂನು ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
‘ಕುಮಾರಸ್ವಾಮಿಕೂಡ ಭ್ರಷ್ಟ’
‘ರಾಮನಗರದ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕೇವಲ ಎರಡು ಗಂಟೆ ಅವಧಿಯಲ್ಲಿ ಮಹತ್ವದ ಕಡತವೊಂದಕ್ಕೆ ಸಹಿ ಹಾಕಿ, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದಾರೆ. ಇದು ಭ್ರಷ್ಟತೆಯ ಇನ್ನೊಂದು ಮುಖವೇ ಆಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದವರು ಸಾರ್ವಜನಿಕ ಜೀವನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಇದನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ಟೀಕಿಸಿದರು.
‘ಅಧಿಕಾರದ ದಾಹ ಮತ್ತು ‘ಕಿಂಗ್ ಮೇಕರ್’ ಆಗಬೇಕು ಎಂಬ ಹಂಬಲದಿಂದ ಎಚ್ಡಿಕೆ ಅವರು ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಗಳು ಎದುರಾದಾಗೆಲ್ಲ ಸ್ಪರ್ಧಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಒಮ್ಮೆ ಜನರು ವ್ಯಕ್ತಪಡಿಸಿದ ವಿಶ್ವಾಸಕ್ಕೆ ರಾಜಕಾರಣಿ ಕೃತಜ್ಞನಾಗಿಬೇಕು’ ಎಂದು ಅವರು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.