ADVERTISEMENT

ಜನಸಂಪರ್ಕ ಸಭೆ ಮತ್ತೆ ವಿಫಲ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 4:55 IST
Last Updated 1 ಅಕ್ಟೋಬರ್ 2012, 4:55 IST
ಜನಸಂಪರ್ಕ ಸಭೆ ಮತ್ತೆ ವಿಫಲ
ಜನಸಂಪರ್ಕ ಸಭೆ ಮತ್ತೆ ವಿಫಲ   

ದೇವನಹಳ್ಳಿ: ಕಳೆದ ಎರಡು ತಿಂಗಳಲ್ಲಿ ಎರಡನೇ ಬಾರಿಗೆ  ಸಾರ್ವಜನಿಕರ ಕುಂದುಕೊರತೆ ಚರ್ಚಿಸಲು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಲೋಕಾಯುಕ್ತರ ಜನಸಂಪರ್ಕ ಸಭೆ ಮತ್ತೆ ವಿಫಲವಾಯತು.

ತೋಟಗಾರಿಕಾ, ಆಹಾರ ಇಲಾಖೆಯ, ಪುರಸಭೆ, ಲೋಕೋಪಯೋಗಿ ಇಲಾಖೆ, ತಹಸೀಲ್ದಾರ್ ಹೊರತುಪಡಿಸಿ ಯಾವುದೇ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಲಿಲ್ಲ.

ಸಾರ್ವಜನಿಕರಿಗೂ ಸೂಕ್ತ ಮಾಹಿತಿ ಇರಲಿಲ್ಲ ಎಂದು ಸಭೆಯಲ್ಲಿದ್ದ ಬೆರಳೆಣಿಕೆಯಷ್ಟು ಜನರು ಲೋಕಾಯುಕ್ತರ ಗಮನಕ್ಕೆ ತಂದರು. ಚರಂಡಿ ಶುಚಿತ್ವ, ಕಸ ತ್ಯಾಜ್ಯ ವಿಲೇವಾರಿ, ಪಟ್ಟಣದಲ್ಲಿರುವ ಹೈಮಾಸ್ ದೀಪಗಳು ಕೆಟ್ಟಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪುರಸಭೆ ವಿಫಲವಾಗಿದೆ ಎಂದು ಜೆ.ಡಿ.ಯು ಎಸ್ಸಿ, ಎಸ್ಟಿ ಘಟಕದ ಎಂ.ಶ್ರಿನಿವಾಸ್, ಲಕ್ಷ್ಮಣ ಎಂಬುವವರು ಲೋಕಾಯುಕ್ತರ ಗಮನಕ್ಕೆ ತಂದರು.

ಪುರಸಭೆಯಲ್ಲಿ ವಾಸಸ್ಥಳ ದೃಢೀಕರಣ ಪತ್ರಕ್ಕೆ ಸಾರ್ವಜನಿಕರಿಂದ ರೂ. 50  ಪಡೆಯಲಾಗುತ್ತಿದೆ. ಆದರೆ ರಸೀದಿಯನ್ನು ಮಾತ್ರ 25 ರೂಗಳಿಗೆ ನೀಡಲಾಗುತ್ತಿದೆ. ಇದು ಲಂಚವೋ ಅಥವಾ ಅಭಿವೃದ್ಧಿ ಹಣವೋ ಎಂಬುದನ್ನು ಪುರಸಭೆ ಸ್ಪಷ್ಟಪಡಿಸಬೇಕು ಎಂದು ಶಿವಪ್ರಸಾದ್ ಆಗ್ರಹಿಸಿದರು. ಇದನ್ನು ಆಲಿಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್ ವಜೀರ್ ಅಲಿಖಾನ್ ಈ ಬಗ್ಗೆ ಲಿಖಿತ ದೂರು ಸಲ್ಲಿಸುವಂತೆ ತಿಳಿಸಿದರು.

ಇದರಿಂದ ತೃಪ್ತರಾಗದ ಶ್ರಿನಿವಾಸ್, `ಕಳೆದ ಸಭೆಗೆ ಜಿಲ್ಲಾ ಲೋಕಾಯುಕ್ತರು ಹಾಗೂ ಎಸ್.ಪಿ ಆಗಮಿಸಿದ್ದರು. ಅವರಿಗೆ ಈ ಸಂಬಂಧ ಕಡತಗಳ ರಾಶಿಯನ್ನೇ ನೀಡಲಾಗಿದೆ. ಈಗ ನೀವು ಬಂದು ಅದೇ ಮಾಹಿತಿ ಅಥವಾ ದೂರು ಕೊಡಿ ಎನ್ನುತ್ತಿದ್ದೀರಿ. ಪದೇ ಪದೇ ದೂರು ನೀಡುತ್ತಾ ಹೋದರೆ ದೂರುಗಳು ಇತ್ಯರ್ಥವಾಗುವುದಾದರೂ ಯಾವಾಗ~ ಎಂದರು.

ಪ್ರತಿ ಸಭೆಗೆ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಲೋಕಾಯುಕ್ತರೇ ಬಂದರೆ ಸಮಸ್ಯೆಗಳ ಅರಿವು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಪ್ರತಿ ಬಾರಿ ಬೇರೆಯವರು ಬಂದರೆ ಸ್ಥಳಿಯ ಸಮಸ್ಯೆಗಳು ಅವರಿಗೆ ಗೊತ್ತಾಗುವುದಿಲ್ಲ.

ಅಲ್ಲದೇ ಲೋಕಾಯುಕ್ತರ ಜನಸಂಪರ್ಕ ಸಭೆಗೆ ಮುನ್ನ ಗ್ರಾಮ ಪಂಚಾಯಿತಿಯು ಸಂಬಂಧಿಸಿದ ಎಲ್ಲಾ ಇಲಾಖೆಗಳ ನಾಮಫಲಕದಲ್ಲಿ ಜನಸಂಪರ್ಕ ಸಭೆಯ ಬಗ್ಗೆ ಮಾಹಿತಿ ನೀಡುವುದು ಸೂಕ್ತ ಎಂದರು. ಮುಂದೆ ನಡೆಯುವ ಸಭೆಗೆ ಪೂರ್ವನಿಗದಿಯಾಗಿ ದಿನಾಕವನ್ನು ತಿಳಿಸುವುದಾಗಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ತಿಳಿಸಿದರು.

ಪಿಡಬ್ಲ್ಯೂಡಿ ಎಂಜಿನಿಯರ್ ರಾಧಾಕೃಷ್ಣ, ತಹಸೀಲ್ದಾರ್, ಕೇಶವಮೂರ್ತಿ, ಜಿಲ್ಲಾ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸುಬ್ರಮಣಿ, ಪಿ.ಸಿ.ಮಂಜು, ಜಾವಿದ್ ರೆಹಮಾನ್ ತೋಟಗಾರಿಕೆ ಇಲಾಖೆ ಅಧಿಕಾರಿ ಉಮಾಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.