ವಿಜಯಪುರ: ಮಳೆ ಬಂದರೆ ಓಡಾಡಲಿಕ್ಕೆ ಆಗೊಲ್ಲ. ಚರಂಡಿಗಳು ತುಂಬಿ ಹೋಗಿ ನೀರು ಹೊರಗೆ ಹೋಗದೆ ನಿಂತಿವೆ ಎಂದು ಶಾಂತಿನಗರದ ನಿವಾಸಿಗಳು ಪುರಸಭೆಯ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಜುನಾಥ್, ಶಾಂತಮ್ಮ, ಮಂಜುಳಾ, ಮುನಿಕೃಷ್ಣಪ್ಪ, ಸುಜಾತಮ್ಮ, ಅಶ್ವಿನಿ, ಕಿಶೋರ್, ರಾಜು, ಮುಂತಾದವರು ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿನ 18 ನೇ ವಾರ್ಡಿನ ಶಾಂತಿನಗರ ಮೊದಲನೇ ಬೀದಿಯಲ್ಲಿ ಸಂಚಾರ ಮಾಡಲಿಕ್ಕೆ ಕಿರಿದಾಗಿರುವ ರಸ್ತೆ, ರಸ್ತೆಯ ನಡುವೆ ರಸ್ತೆಗಿಂತಲೂ ಮೇಲ್ಮಟ್ಟದಲ್ಲಿರುವ ಮ್ಯಾನ್ ಹೋಲ್ ಗಳು, ಕಿರಿದಾದ ರಸ್ತೆಯ ನಡುವೆ ಎರಡು ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿ ಮಾಡಿದ್ದಾರೆ ಎನ್ನಲಾಗಿದೆ.
ಚರಂಡಿಗಾಗಿ ಅಗೆದಿರುವ ಹಳ್ಳದಲ್ಲೆ ಕುಡಿಯುವ ನೀರಿಗಾಗಿ ಪೈಪ್ ಲೈನ್ ಮಾಡಿದ್ದಾರೆ. ಹಳ್ಳವನ್ನು ಸರಿಯಾಗಿ ಮುಚ್ಚಿಲ್ಲ ಎಂದು ದೂರಲಾಗಿದೆ. ಇದರಿಂದ ಮಳೆ ಬಂದರೆ ನೀರೆಲ್ಲ ಹಳ್ಳದಲ್ಲಿ ತುಂಬಿಕೊಳ್ಳುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಕೊಳಚೆ ನೀರಿನಿಂದ ತುಂಬಿ ಹೋಗಿರುವ ಚರಂಡಿಗಳಿಂದ ಕೊಳಚೆ ನೀರು, ಹುಳುಗಳು ಮನೆಗಳ ಒಳಗೆ ಬರುತ್ತವೆ.
ನೆಮ್ಮದಿಯಿಂದ ಊಟ ಮಾಡಲಿಕ್ಕೂ ಆಗುತ್ತಿಲ್ಲ ಎಂದು ಈ ನಿವಾಸಿಗಳು ದೂರಿದ್ದಾರೆ. ಮನೆಗಳ ಪಕ್ಕದಲ್ಲಿ ರಾಜಕಾಲುವೆಯಿದ್ದರೂ ಚರಂಡಿಯಲ್ಲಿನ ನೀರು ಸರಾಗವಾಗಿ ಹರಿಯುತ್ತಿಲ್ಲ, ನೀರು ನಿಂತಲ್ಲೆ ನಿಂತಿರುವುದರಿಂದ ರಾತ್ರಿಯ ವೇಳೆಯಲ್ಲಿ ಸೊಳ್ಳೆಗಳ ಕಾಟ, ಹಗಲಿನಲ್ಲಿ ಚರಂಡಿಯಿಂದ ಬರುವಂತಹ ದುರ್ವಾಸನೆಯಿಂದ ಇಲ್ಲಿ ಜೀವನ ಮಾಡುವುದೇ ಕಷ್ಟಕರವಾಗಿದೆ ಎಂದು ಆರೋಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.