ದೇವನಹಳ್ಳಿ: ತಾಲ್ಲೂಕಿನ ಸಾದಹಳ್ಳಿ ಗೇಟ್ಬಳಿ ಇರುವ ಟೋಲ್ಗೇಟ್ನಲ್ಲಿ ಸ್ಥಳೀಯರಿಗೂ ಸುಂಕ ವಿಧಿಸುತ್ತಿರುವ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳ ಮುಖಂಡರು ಭಾನುವಾರ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ವಿಶ್ವನಾಥ್, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟೋಲ್ ಸುಂಕ ವಸೂಲಾತಿ ಮಾಡುವಂತಿಲ್ಲ. ಈಗಾಗಲೇ ಬಿಎಂಟಿಸಿ ಬಸ್ಗಳಲ್ಲಿ ದಿನದ ಪಾಸ್ ಮತ್ತು ನಿತ್ಯ ಪ್ರಯಾಣಿಕರ ಪ್ರತಿ ಟಿಕೆಟ್ಗೆ 1 ರಿಂದ 2 ರೂಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಿದೆ.
ಬಿಎಂಟಿಸಿ ಬಸ್ಗಳು ಪ್ರತಿ ಟ್ರಿಪ್ಗೆ 60 ರೂ ಸುಂಕ ನೀಡಬೇಕಿರುವುದರಿಂದ ಸಾಕಷ್ಟು ಬಸ್ಗಳು ಸ್ಥಗಿತಗೊಂಡಿವೆ. ಇದರಿಮದ ವಿದ್ಯಾರ್ಥಿಗಳಿಗೆ ದಿನ ನಿತ್ಯದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.
ಸರ್ಕಾರದ ಆದೇಶ ಪತ್ರದಲ್ಲಿ ಪ್ರತಿ ಕಾರಿಗೆ 14-50 ರೂ. ವಿಧಿಸಲಾಗಿದ್ದರೂ 5-50 ರೂಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿದೆ. ಲಘು ಮತ್ತು ಭಾರಿ ವಾಹನಗಳಿಗೂ ಇದೇ ಸಮಸ್ಯೆ ತಲೆದೂರಿದೆ. ಇದೊಂದು ವ್ಯವಸ್ಥಿತ ವಂಚನೆಯ ಜಾಲ ಎಂದು ಆರೋಪಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ವಿಜಯಪುರ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಬಾಗೇಪಲ್ಲಿಯ ರೈತರೊಂದಿಗೆ ಇನ್ನೆರಡು ದಿನದಲ್ಲಿ ಸಭೆ ನಡೆಸಿ ಪ್ರತಿಭಟನೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದರು.
ಶಾಸಕ ಕೆ.ವೆಂಕಟಸ್ವಾಮಿ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯೇ ಮುಖ್ಯ. ಈ ವಿಷಯದಲ್ಲಿ ಸಂಘ ಸಂಸ್ಥೆಗಳು ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ. ಮಾರ್ಚ್ 24 ರಂದು ಕೇಂದ್ರ ಕಾಪೋರೇಟ್ ಸಚಿವ ಎಂ. ವೀರಪ್ಪ ಮೊಯಿಲಿ ತಾಲ್ಲೂಕು ಕೇಂದ್ರಕ್ಕೆ ಆಗಮಿಸಲ್ದ್ದಿದಾರೆ.
ಈ ವೇಳೆ ಅವರಿಗೆ ಮನವಿ ಸಲ್ಲಿಲಾಗುವುದು. ಒಂದು ವೇಳೆ ಪೂರಕವಾಗಿ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.
ಹೊಸಕೋಟೆ, ನೆಲಮಂಗಲ ಸೇರಿದಂತೆ ರಾಜ್ಯದಾದ್ಯಂತ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸುಂಕ ವಸೂಲಿ ಮಾಡುತ್ತಿರುವ ಖಾಸಗಿ ಗುತ್ತಿಗೆ ಕಂಪನಿಗಳು ಸ್ಥಳೀಯರನ್ನು ಹೊರತುಪಡಿಸಿ ಸುಂಕ ವಸೂಲಿ ಮಾಡುತ್ತಿವೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಕಂಪೆನಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲು ಕೆಲ ಮುಖಂಡರು ಸಲಹೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಪರಿಷದ್ ಸದಸ್ಯ ಗುರುಸ್ವಾಮಿ, ಜಿಲ್ಲಾ ಸಂಚಾಲಕ ರಮೇಶ್, ಭೂ ನ್ಯಾಯ ಮಂಡಳಿ ಸದಸ್ಯ ನಾರಾಯಣ ಸ್ವಾಮಿ, ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ಎ.ಎನ್.ಮುನೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ನಳಂದ ಬಿ.ಎಡ್ ಕಾಲೇಜ್ ಪ್ರಾಂಶುಪಾಲ ಬಿ.ಎನ್.ಕೃಷ್ಣಪ್ಪ, ಶಿಕ್ಷಕ ಶರಣಯ್ಯ ಹಿರೇಮಠ್, ಮುಖಂಡ ಸುರೇಶ್, ಬಸ್ ಮಾಲಿಕ ಸಂಘದ ಪದಾಧಿಕಾರಿಗಳು ಇದ್ದರು.
ಅಪಘಾತ: ಒಬ್ಬನ ಸಾವು, ಮೂವರ ಸ್ಥಿತಿ ಗಂಭೀರ
ದೇವನಹಳ್ಳಿ: ವೇಗವಾಗಿ ಬಂದ ಸ್ವಿಫ್ಟ್ ಕಾರೊಂದು ಮುಂದೆ ಚಲಿಸುತ್ತಿದ್ದ ಟಿ.ಟಿ ವ್ಯಾನಿಗೆ ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಂದಿ ರಸ್ತೆಯ ಕೋಡಗುರ್ಕಿ ಬಳಿ ಭಾನುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ವೆಂಕಟೇಶ (50) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಶ್ರಿಧರ್ (32), ಚನ್ನಪ್ಪ (36) ಫಯಾಜ್ (32) ಇವರನ್ನು ಬೆಂಗಳೂರಿನ ನಿಮ್ಹಾನ್ಸ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲರೂ ತರಕಾರಿ ವ್ಯಾಪಾರಿಗಳು. ನಂದಿಬೆಟ್ಟದ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ಮಧುಕರ್, ಎ.ಎಸ್.ಐ ನಾರಾಯಣಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.