ಕನಕಪುರ: ಜೆ.ಡಿ.ಎಸ್ ತೊರೆದು ಬಿ.ಜೆ.ಪಿ.ಗೆ ಬಂದಿರುವ ನಂದಿನಿಗೌಡ ಅವರು ಪಕ್ಷ ಸಂಘಟಿಸುವ ಬದಲು ಪಕ್ಷಕ್ಕೆ ಮಾರಕವಾಗುತ್ತಿದ್ದಾರೆ ಎಂದು ಬಿ.ಜೆ.ಪಿ. ರಾಜ್ಯ ಕಾರ್ಯಕಾರಣಿ ವಿಶೇಷ ಆಹ್ವಾನಿತ ಬಿ.ನಾಗರಾಜು ಆರೋಪಿಸಿದರು.
ನಗರದ ಬಿ.ಜೆ.ಪಿ. ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ನಂದಿನಿಗೌಡ ಜೆ.ಡಿ.ಎಸ್.ನಲ್ಲಿದ್ದಾಗ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿ ಅವರ ವಿರುದ್ಧ ಅವಹೇಳ ನಕಾರಿಯಾಗಿ ಮಾತನಾಡಿ ಗಲಾಟೆ ಮಾಡಿಸಿದ್ದರು. ಕಾರ್ಯಕರ್ತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ವಿರುದ್ಧ ಆರೋಪ ಮಾಡುತ್ತಾ ಪಕ್ಷವನ್ನು ಬಿಟ್ಟರು ಎಂದು ದೂರಿದರು.
ಅವರು ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರಿಲ್ಲ, ಯಾವೊಬ್ಬಮುಖಂಡರೂ ಜೆ.ಡಿ.ಎಸ್. ತೊರೆದು ಬಿಜೆಪಿಗೆ ಬಂದಿಲ್ಲ. ತಮ್ಮ ಬಳಿ ಹಣ
ವಿದೆ ಎಂದು ಎಲ್ಲರನ್ನು ತುಚ್ಛವಾಗಿ ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.
ಶಿಸ್ತು ಹೊಂದಿದ್ದ ಬಿಜೆಪಿಯಲ್ಲಿ ಏನೇ ಮಾಡಬೇಕಿದ್ದರೂ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ನಗರ ಮಂಡಲ ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷರ ಬದಲಾವಣೆ ಕುರಿತು ಜಿಲ್ಲಾ ಘಟಕದ ಅಧ್ಯಕ್ಷರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ವರಿಷ್ಠರಿಗೆ ಮಾಹಿತಿ
ನಂದಿನಿಗೌಡ ಮತ್ತು ಅವರ ಬೆಂಬಲಿಗರಾಗಿ ಕೆಲಸ ಮಾಡುತ್ತಿರುವ ಟಿ.ವಿ.ರಾಜು, ಕೃಷ್ಣಪ್ಪ, ಭರತ್ ಇವರ ನಡವಳಿಕೆಯನ್ನು ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ಜಗನ್ನಾಥ್ ತಿಳಿಸಿದರು.
ಪಕ್ಷದೊಳಗಿನ ವಿಚಾರವನ್ನು ರಂಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಮೂಲಕ ಪಕ್ಷದ ಚೌಕಟ್ಟನ್ನು ಮೀರಿರುವ ನಂದಿನಿಗೌಡ ಮತ್ತು ಅವರ ಬೆಂಬಲಿಗರ ವಿರುದ್ದ ಪಕ್ಷದ ವರಿಷ್ಠರ ಕ್ರಮ ಕೈಗೊಳ್ಳಲಿದ್ದಾರೆ. ನಂತರ ಮುಂದಿನ ನಡೆಯನ್ನು ತೀರ್ಮಾನಿಸುವುದಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.