ದೊಡ್ಡಬಳ್ಳಾಪುರ: ಮಳೆಗೆ ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಪ್ರಮುಖ ಕೆರೆಗಳಲ್ಲಿ ಒಂದಾದ ನಾಗರಕೆರೆ ಅಂಗಳ ಹಳೆ ಮನೆ ಮಣ್ಣು, ಕೋಳಿ ತ್ಯಾಜ್ಯಗಳಿಂದ ತುಂಬಿಕೊಳ್ಳುತ್ತಿದ್ದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೆರೆಗಳು ಕೋಡಿ ಬೀಳುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಅರ್ಕಾವತಿ ನದಿ ಪುನಶ್ಚೇತನ ಹೋರಾಟ ಸಮಿತಿ ಸಂಚಾಲಕರಾದ ಮಂಜುನಾಥ್ ಹಾಗೂ ಚಿದಾನಂದ್, ‘ನಗರದ ಹೃದಯ ಭಾಗವಾಗಿರುವ ನಾಗರಕೆರೆ ಸೂಕ್ತ ರಕ್ಷಣೆ ಇಲ್ಲದೆ ಸಣ್ಣ ನೀರಾವರಿ ಇಲಾಖೆ, ನಗರಸಭೆ ಎರಡರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆರೆ ಅಂಗಳಕ್ಕೆ ಯಾರು ಏನು ತಂದು ರಾಶಿ ಹಾಕಿ ಹೋದರೂ ಕೇಳುವವರೆ ಇಲ್ಲದಾಗಿದೆ’ ಎಂದಿದ್ದಾರೆ.
‘ಇದರಿಂದಾಗಿ ನಾಗರಕೆರೇ ಅಂಗಳದಲ್ಲಿ ಎಲ್ಲಿ ನೋಡಿದರು ಹಳೆ ಮನೆಗಳನ್ನು ಕಿತ್ತುಹಾಕಿ ಉಳಿದಿರುವ ಸಿಮೆಂಟ್ ಇಟ್ಟಿಗೆ, ತ್ಯಾಜ್ಯ ಮಣ್ಣಿನ ರಾಶಿಗಳನ್ನೇ ಕಾಣಬಹುದಾಗಿದೆ’ ಎಂದಿದ್ದಾರೆ.
ಕೆರೆಯ ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಇಲಾಖೆ ಹಾಗೂ ನಗರಸಭೆ ಪ್ರತಿ ವರ್ಷವು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಹೂಳು ತೆಗೆಸಲಾಗುತ್ತದೆ. ಆದರೆ ಕೆರೆ ಅಂಗಳಕ್ಕೆ ತಂದು ಅಕ್ರಮವಾಗಿ ರಾಶಿ ಹಾಕುವ ತ್ಯಾಜ್ಯವನ್ನು ಮಾತ್ರ ತಡೆಯುತ್ತಿಲ್ಲ ಎಂದು ದೂರಲಾಗಿದೆ. ಈ ಕೂಡಲೇ ನಗರಸಭೆ ಕ್ರಮ ಕೈಗೊಳ್ಳಬೇಕು, ಇದರಿಂದ ಅಕ್ರಮ ತಡೆಯಲು ಸಾಧ್ಯವಾಗಲಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.