ADVERTISEMENT

ಮಕ್ಕಳ ಸಂತೆಯಲ್ಲಿ ವ್ಯಾಪಾರದ ಭರಾಟೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 7:15 IST
Last Updated 8 ಜನವರಿ 2011, 7:15 IST

ದೊಡ್ಡಬಳ್ಳಾಪುರ: ಕಡಲೇ ಕಾಯಿ... ಕಡಲೇಕಾಯಿ... ಇಲ್ಲಿ ಬನ್ನಿ ಒಳ್ಳೆಯ ತರಕಾರಿ, ಸೊಪ್ಪು ಇದೆ ತಗ್ಗೊಳ್ಳಿ, ತಗ್ಗೊಳ್ಳಿ ಇದು ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಮಕ್ಕಳ ಸಂತೆಯಲ್ಲಿನ ವ್ಯಾಪಾರದ ಭರಾಟೆ. ವಿದ್ಯಾರ್ಥಿಗಳು ಸೌತೇಕಾಯಿ, ನಾಟಿ ನೆಲಗಡೆ, ವಿವಿಧ ಜಾತಿಯ ಸೊಪ್ಪು ಮತ್ತಿತರ ವಸ್ತುಗಳನ್ನು ಗುಡ್ಡೆಹಾಕಿಕೊಂಡು ಮಾರಿದರು. ಪುಸ್ತಕ ಹಿಡಿಯುತ್ತಿದ್ದ ಕೈ ತಕ್ಕಡಿಯನ್ನು ಹಿಡಿದಿತ್ತು. ಮಕ್ಕಳಿಗೆ ವ್ಯಾಪಾರ ವಹಿವಾಟು, ಗಣಿತದ ಲೆಕ್ಕಗಳನ್ನು ಪ್ರಾಯೋಗಿಕವಾಗಿ ಕಲಿಸುವ ಉದ್ದೇಶದಿಂದ ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಮಕ್ಕಳ ಸಂತೆಯಲ್ಲಿ ಮಕ್ಕಳೆ ಗ್ರಾಹಕರು, ಮಾರಾಟಗಾರರು ಆಗಿದ್ದು ವಿಶೇಷವಾಗಿತ್ತು. 

ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆ ನಡೆಸುತ್ತಿರುವ ‘ಮಕ್ಕಳ ಸಂತೆ’  ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗಣಿತದ ವಿಷಯದಲ್ಲಿನ ಕೂಡುವ, ಕಳೆಯುವ ಲೆಕ್ಕಗಳನ್ನು ಪ್ರಾಯೋಗಿಕವಾಗಿ ಕಲಿಸುವಲ್ಲಿ ಹೆಚ್ಚು ಉಪಯುಕ್ತವಾಗಿದೆ ಎನ್ನುತ್ತಾರೆ ಶಿಕ್ಷಕ ರಾಜಶೇಖರ್. ಚಾಲನೆ: ಸಂತೆಗೂ ಮೊದಲು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾದಲ್ಲಿ ಮಕ್ಕಳ ಸಂತೆ ಹಾಗೂ ಮೆಟ್ರಿಕ್ ಮೇಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಹನುಮಂತೇಗೌಡ  ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಕಲಿಕೆಯ ಜೊತೆ ಪ್ರಾಯೋಗಿಕವಾಗಿ ವ್ಯಾವಹಾರಿಕತೆ ಕಲಿಸುವುದರಿಂದ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಈ ನಿಟ್ಟಿಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸುತ್ತಿರುವ ಮಕ್ಕಳ ಸಂತೆ ಅತ್ಯಂತ ಉಪಯುಕ್ತ.ಸಂತೆಯಲ್ಲಿ ವ್ಯಾಪಾರ ಮಾಡುವುದರಿಂದ ಮಕ್ಕಳು ಹಣಕಾಸಿನ ವ್ಯವಹಾರವನ್ನು ಕಲಿಯುತ್ತಾರೆ ಎಂದು ಹೇಳಿದರು.


ಬೆಂ.ಗ್ರಾ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಾಜೇಂದ್ರ, ಸಮನ್ವಯ ಅಧಿಕಾರಿ ಟಿ.ಶ್ರೀನಿವಾಸರೆಡ್ಡಿ, ಬೆಂ.ಗ್ರಾ.ಜಿ.ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಅಧ್ಯಕ್ಷ ಎಂ.ರಾಮಚಂದ್ರಯ್ಯ, ತಾಲ್ಲೂಕು ಅಧ್ಯಕ್ಷ ಬಿ.ಸಿದ್ದಗಂಗಯ್ಯ, ಕಾರ್ಯದರ್ಶಿ ಮಲ್ಲಿಕಾರ್ಜುನರೆಡ್ಡಿ, ತಾ.ಪಂ.ಸದಸ್ಯ ಓಬದೇನಹಳ್ಳಿ ಮುನಿಯಪ್ಪ, ತಾ.ಪಂ.ಮಾಜಿ ಉಪಾಧ್ಯಕ್ಷ ಗೋಪಾಲ್‌ನಾಯ್ಕಿ, ಜಿ.ಪಂ.ಮಾಜಿ ಸದಸ್ಯ ನರಸಪ್ಪ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT