ADVERTISEMENT

ಮಕ್ಕಳ ಸ್ಥಿತಿ ಅತಂತ್ರ: ಆಕ್ರೋಶ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಅಡುಗೆ ಮಾಡುವ ಮೂಲಕ ಧರಣಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2015, 9:55 IST
Last Updated 9 ಜೂನ್ 2015, 9:55 IST
ದೊಡ್ಡಬಳ್ಳಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ರಾಜ್ಯ ರೈತ ಸಂಘ ಹಾಗೂ ಕಾನೂನು ರಕ್ಷಣಾ ವೇದಿಕೆ ಕಾರ್ಯಕರ್ತರು ವಿದ್ಯಾರ್ಥಿಗಳೊಂದಿಗೆ ಧರಣಿ ನಡೆಸಿದರು
ದೊಡ್ಡಬಳ್ಳಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ರಾಜ್ಯ ರೈತ ಸಂಘ ಹಾಗೂ ಕಾನೂನು ರಕ್ಷಣಾ ವೇದಿಕೆ ಕಾರ್ಯಕರ್ತರು ವಿದ್ಯಾರ್ಥಿಗಳೊಂದಿಗೆ ಧರಣಿ ನಡೆಸಿದರು   

ದೊಡ್ಡಬಳ್ಳಾಪುರ:  ಖಾಸಗಿ ಶಾಲೆ ಬಂದ್‌ ಆಗಿದ್ದರೂ ಆರ್‌ಟಿಇ ಯೋಜನೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಇತರೆ ಶಾಲೆಯಲ್ಲೂ ಆರ್‌ಟಿಇ ಯೋಜನೆಯಲ್ಲಿಯೇ ದಾಖಲಾತಿ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಹಾಗೂ ಕಾನೂನು ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ವಿದ್ಯಾರ್ಥಿಗಳೊಂದಿಗೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು, ತಾಲ್ಲೂಕಿನ  ಗಾಳಿಪೂಜೆ ಗ್ರಾಮದ ಸಮೀಪ 8 ವರ್ಷಗಳ ಹಿಂದೆ ಪ್ರಾರಂಭವಾದ ಗ್ರೀನ್‌ವ್ಯಾಲಿ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೊರತೆಯಿಂದ 2015–16ನೇ ಸಾಲಿನಿಂದ ದಾಖಲಾತಿನಿಲ್ಲಿಸಿ ಶಾಲೆಯನ್ನು ಬಂದ್‌ ಮಾಡಿದೆ. ಆದರೆ ಈ ಹಿಂದೆ ಈ ಶಾಲೆಯಲ್ಲಿ ಆರ್‌ಟಿಇ  ಯೋಜನೆಯಲ್ಲಿ ದಾಖಲಾಗಿ 1 ರಿಂದ 4ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದ 13 ಜನ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಅತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿದ್ಯಾರ್ಥಿಗಳಿಗೆ ಇತರೆ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ನಿಯಮದಲ್ಲಿಯೇ ದಾಖಲಾತಿ ನೀಡಬೇಕು. ಇದರ ಜವಾಬ್ದಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೇರಿದೆ ಎಂದು ಹೇಳಿದರು.

ಧರಣಿಯಲ್ಲಿ ರಾಜ್ಯ ರೈತ ಸಂಘದ ಮುಖಂಡರಾದ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಟೈಲರ್‌ಮುನಿರಾಜು, ತಿಮ್ಮಣ್ಣ,ಸತೀಶ್‌,ಕೆ.ಪಿ.ಕುಮಾರ್‌, ವಸಂತ್‌ಕುಮಾರ್‌ ತಾಲ್ಲೂಕು ಅಧ್ಯಕ್ಷ ಪ್ರಸನ್ನ, ಕಾನೂನು ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಸಿ.ಕಿರಣ್‌ಕುಮಾರ್‌, ಹಾಜರಿದ್ದರು.

ಧರಣಿ ನಿತರ ಸಂಘಟನೆ ಮುಖಂಡರು ಹಾಗೂ ಪೋಷಕರೊಂದಿಗೆ ಸಭೆ ನಡೆಸಿದ ನಂತರ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಆರ್‌ಟಿಇ ನಿಯಮ ಜಾರಿಗೆ ಬಂದ ನಂತರ ಉಂಟಾಗಿರುವ ಈ ಸಮಸ್ಯೆ ಇಲಾಖೆಗೂ ಹೊಸದು. ಹೀಗಾಗಿ ಶಿಕ್ಷಣ ಇಲಾಖೆ ಆಯುಕ್ತರ ಗಮನಕ್ಕೆ ತರಲಾಗಿದೆ. ಅಲ್ಲಿಯವರೆಗೂ ಪೋಷಕರು ಬಯಸಿದ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ದಾಖಲಾತಿ ನೀಡಲಾಗುವುದು. ಶಿಕ್ಷಣ ಇಲಾಖೆ ಆಯುಕ್ತರಿಂದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.