ADVERTISEMENT

`ಮೌಲ್ಯಮಾಪನ ಪ್ರಾಮಾಣಿಕವಾಗಿರಲಿ'

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 8:53 IST
Last Updated 6 ಸೆಪ್ಟೆಂಬರ್ 2013, 8:53 IST

ಕುದೂರು (ಮಾಗಡಿ): `ಶಿಕ್ಷಕರು ಪ್ರಾಮಾಣಿಕವಾಗಿ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಪ್ರಾಧಾನ್ಯತೆ ನೀಡಬೇಕು' ಎಂದು ಸಂಪನ್ಮೂಲ ವ್ಯಕ್ತಿ ಲತಾ ತಿಳಿಸಿದರು.

ಬುಧವಾರ ಇಲ್ಲಿನ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಆರಂಭವಾದ 2 ದಿನಗಳ  ಕುದೂರು ಮತ್ತು ತಿಪ್ಪಸಂದ್ರ ಹೋಬಳಿಯ ಶಿಕ್ಷಕರ ಪರಿಕ್ಷಾಮೌಲ್ಯಮಾಪನ ಹಾಗೂ ಪುಷ್ಟಿ ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು.

ಮೌಲ್ಯಮಾಪನವು ಕೇವಲ ಪರೀಕ್ಷೆಯ ಉತ್ತರ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣೀಗೆಯನ್ನು ಪತ್ತೆಹಚ್ಚುವ ಮಾಪನವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಬಹುದಾದ ವಿವಿಧ ರೀತಿಯ ಮೌಲ್ಯಮಾಪನದ ಬಗ್ಗೆ ಮಾಹಿತಿ ನೀಡಲಾಯಿತು. ಈ ತಿಂಗಳ ಅಂತ್ಯದಲ್ಲಿ ನಡೆಸಲಾಗುವ 2013-14 ನೇ ಸಾಲಿನ ಮಧ್ಯವಾರ್ಷಿಕ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. ಶಿಕ್ಷಣ ಇಲಾಖೆ ಮಾರ್ಪಾಡು ಮಾಡಿರುವ ನಿರಂತರ ಮೌಲ್ಯಮಾಪನ ವ್ಯವಸ್ಥೆಯ ಹೊಸ ನೀತಿಗಳ ಬಗ್ಗೆ ಶಿಕ್ಷಕರಿಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್, ನರಸಿಂಹಯ್ಯ ಭಾಗವಹಿಸಿದ್ದರು. ಕುದೂರು ಸಮೂಹ ಸಂಪನ್ಮೂಲ ಕೇಂದ್ರದ ಅಧಿಕಾರಿ ಉಮಾಶಂಕರ್ ಮತ್ತು ಕುತ್ತಿನಿಗೆರೆ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್, ತಿಪ್ಪಸಂದ್ರ ಶಾಲೆಯ ಮುಖ್ಯಶಿಕ್ಷಕ ರಾಜಣ್ಣ, ನಂಜಪ್ಪ, ರಘುಪತಿ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.