
ಆನೇಕಲ್: ಯುವ ಪದವೀಧರರನ್ನು ಆರೋಗ್ಯ ಸೇವೆ ರಾಯಭಾರಿಗಳನ್ನಾಗಿ ಮಾಡಿ ಸನಾತನ ಜೀವನ ಪದ್ಧತಿ ಪರಂಪರೆಯ ಮೌಲ್ಯಗಳನ್ನು ತಿಳಿಸಲು ಎಸ್ ವ್ಯಾಸ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜಿಗಣಿ ಎಸ್ ವ್ಯಾಸ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಯುವ ಪದವೀಧರರು ಯೋಗದ ಮೂಲಕ ಉತ್ತಮ ಆರೋಗ್ಯ ಪಡೆಯುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕು. ಯುವ ಪದವೀಧರರು ವೃತ್ತಿಜೀವನವನ್ನು ರಾಷ್ಟ್ರ ನಿರ್ಮಾಣ ಮಾಡಲು ತೊಡಗಿಸಿಕೊಳ್ಳಬೇಕು. ನಗರೀಕರಣ ಮತ್ತು ಜಾಗತೀಕರಣ ಪ್ರಭಾವದಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ನೆಮ್ಮದಿ ಕಾಣೆಯಾಗುತ್ತಿದೆ. ಒತ್ತಡದ ಜೀವನ ನಡೆಸುತ್ತಿದ್ದಾರೆ ಮತ್ತು ಮಾನಸಿಕ ಸಮಸ್ಥಿತಿ ದೂರವಾಗುತ್ತಿದೆ. ಯೋಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸರಳ ಸೂತ್ರ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡಬೇಕು ಎಂದರು.
ಸಮಾಜದಲ್ಲಿ ಶಾಂತಿ ಮೂಡಿಸಲು ಯೋಗ ಅತ್ಯಂತ ಅವಶ್ಯಕ. ವಿಶ್ವದಲ್ಲಿ ಭಯೋತ್ಪಾದನೆ, ಆಕ್ರಮಣ, ಇಬ್ಬರ ನಡುವಿನ ದ್ವೇಷ ಹೆಚ್ಚಾಗುತ್ತಿದೆ. ಹಾಗಾಗಿ ಶಾಂತಿ ಮತ್ತು ನೆಮ್ಮದಿ ಮೂಡಿಸಲು ಯೋಗದ ಮೂಲಕ ಸಾಧ್ಯವಿದೆ. ಯೋಗ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳು ಯೋಗದ ಸೌಲಭ್ಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೃತ್ತಿ ಜೀವನ ಪ್ರಾರಂಭಿಸಬೇಕು ಎಂದರು.
ಕೆನಡಾದ ಹಿಂದೂ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನರೇಶ್ ಮಾತನಾಡಿ, ವಿಶ್ವ ಯೋಗ ದಿನ ಆಚರಿಸುವಲ್ಲಿ ಯೋಗ ವಿಶ್ವವಿದ್ಯಾಲಯದ ಪಾತ್ರ ಪ್ರಮುಖವಾಗಿದೆ. ವಿಶ್ವದ 160ಕ್ಕೂ ಹೆಚ್ಚು ರಾಷ್ಟ್ರಗಳು ಜೂನ್ 21 ಆಚರಿಸುತ್ತಿರುವುದು ಶ್ಲಾಘನೀಯ. ಯೋಗದ ಮೂಲಕ ಸಮಾಜದ ಬದಲಾವಣೆ ಸಾಧ್ಯವಿದೆ ಎಂದರು.
ಎಸ್ ವ್ಯಾಸ ಯೋಗ ವಿಶ್ವವಿದ್ಯಾಲಯದ ಸಂಸ್ಥಾಪಕ ಡಾ.ಎಚ್.ಆರ್.ನಾಗೇಂದ್ರ, ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ದಯಾನಂದಸ್ವಾಮಿ, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ರಿಜಿಸ್ಟರ್ ನಿಂಗೇಗೌಡ, ವಿಶ್ವವಿದ್ಯಾಲಯದ ಸುಬ್ರಮಣ್ಯಂ, ಮಂಜುನಾಥ್, ರಾಮಕೃಷ್ಣ ಇದ್ದರು.
ಎಸ್ ವ್ಯಾಸ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ದಯಾನಂದ ಸ್ವಾಮಿ : ತಾಲ್ಲೂಕಿನ ಜಿಗಣಿ ಸಮೀಪದ ಎಸ್ ವ್ಯಾಸ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ.ಎಚ್.ಆರ್.ದಯಾನಂದ ಸ್ವಾಮಿ ನೇಮಕವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.