ADVERTISEMENT

ರಸ್ತೆ ಅಭಿವೃದ್ಧಿಗೆ ಗಡಿ ಅಡ್ಡಿ !

ದೇವನಹಳ್ಳಿ, ದೊಡ್ಡಬಳ್ಳಾಪುರ ಶಾಸಕರ ನಿರ್ಲಕ್ಷ್ಯಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಜೂನ್ 2015, 8:30 IST
Last Updated 16 ಜೂನ್ 2015, 8:30 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚೀಲೇನಹಳ್ಳಿ ಗ್ರಾಮದ ರಸ್ತೆ ಹದಗೆಟ್ಟಿರುವುದು
ದೊಡ್ಡಬಳ್ಳಾಪುರ ತಾಲ್ಲೂಕಿನ ಚೀಲೇನಹಳ್ಳಿ ಗ್ರಾಮದ ರಸ್ತೆ ಹದಗೆಟ್ಟಿರುವುದು   

ದೊಡ್ಡಬಳ್ಳಾಪುರ:  ತಾಲ್ಲೂಕಿನ ಚಿಲೇನಹಳ್ಳಿ ಗ್ರಾಮ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗಡಿಯಾಗಿರುವುದೇ ಇಲ್ಲಿನ ಜನರಿಗೆ ಶಾಪವಾಗಿ ಪರಿಣಮಿಸಿದೆ. ನಡೆದಾಡಲು ಸಹ ಆಗದಷ್ಟು ಹಾಳಾಗಿ ಹೋಗಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಧ್ಯಭಾಗದಲ್ಲಿರುವ ಚಿಲೇನಹಳ್ಳಿ ಗ್ರಾಮ ಕ್ಷೇತ್ರ ಪುನರ್‌ವಿಂಗಡಣೆ  ನಂತರ ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಗ್ರಾಮದ ರಸ್ತೆ ಇಬ್ಬರು ಶಾಸಕರ ನಡುವೆ ಹರಿದು ಹಂಚಿ ಹೋಗಿದೆ. ದೊಡ್ಡಬಳ್ಳಾಪುರ ಕ್ಷೇತ್ರದ ತಿಪ್ಪೂರು, ಗುಂಡಮಗೆರೆ, ನೆಲ್ಲುಕುಂಟೆ, ಹೊಸಹಳ್ಳಿ ತಾಂಡ ಗ್ರಾಮಗಳಿಗೆ ಚೀಲೇನಹಳ್ಳಿ ಗ್ರಾಮದ ರಸ್ತೆ ಸಂರ್ಪಕ ಕೊಂಡಿಯಾಗಿದೆ.

ಹೀಗಾಗಿ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕರೇ ಅಭಿವೃದ್ಧ್ದಿ ಪಡಿಸಲಿ ಎಂದು ದೇವನಹಳ್ಳಿ ಶಾಸಕರು ಕಂಡು ಕಾಣದಂತೆ ಇದ್ದರೆ, ಚೀಲೇನಹಳ್ಳಿ ಗ್ರಾಮದ ಮತದಾರರು ದೇವನಹಳ್ಳಿ ಕ್ಷೇತ್ರದ ಶಾಸಕರಿಗೆ ಮತ ನೀಡುವುದು. ಹೀಗಾಗಿ ನಾವು ಏಕೆ ರಸ್ತೆ ಅಭಿವೃದ್ಧ್ದಿ ಪಡಿಸಬೇಕು ಎನ್ನುವ ಲೆಕ್ಕಾಚಾರ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕರದ್ದು. ಇಬ್ಬರು ಶಾಸಕರ ಕಣ್ಣಾಮುಚ್ಚಾಲೆ ಆಟದಲ್ಲಿ ಹಾಳಾಗಿರುವ ರಸ್ತೆಯಲ್ಲಿ ನಡೆದಾಡುವ ಕಷ್ಟ ನಮ್ಮದಾಗಿದೆ ಎನ್ನುತ್ತಾರೆ ಇಲ್ಲಿನ ಜನ.

ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಕಟ್ಟಕಡೆಯ ಗ್ರಾಮವಾಗಿರುವ ಚೀಲೇನಹಳ್ಳಿಗೆ ಶಾಸಕರು ಭೇಟಿ ನೀಡಿರುವುದೇ ಅಪರೂಪ. ದೇವನಹಳ್ಳಿಯಿಂದ ಸುಮಾರು 35 ಕಿ.ಮೀ.ದೂರದಲ್ಲಿರುವ ಚೀಲೇನಹಳ್ಳಿ ಗ್ರಾಮಕ್ಕೆ ಯಾವ ಕಡೆಯಿಂದಲೂ ರಸ್ತೆಗಳು ಸರಿ ಇಲ್ಲದೆ ಇಲ್ಲಿನ ಜನ ನಗರಕ್ಕೆ ಹೋಗಬೇಕಾದರೆ ನರಕಯಾತನೆ ಪಡುವಂತಾಗಿದೆ ಎನ್ನುತ್ತಾರೆ ರಾಜ್ಯ ರೈತ ಸಂಘದ ತಾಲ್ಲೂಕು ಖಜಾಂಚಿ ಟೈಲರ್‌ಮುನಿರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.