ವಿಜಯಪುರ: ಬ್ರಾಹ್ಮಣರ ಅಭಿವೃದ್ಧಿ ದೃಷ್ಠಿಯಿಂದ ವಿಜಯಪುರದಲ್ಲಿ ₹ 1.55 ಕೋಟಿ ವೆಚ್ಚದಲ್ಲಿ ಬ್ರಾಹ್ಮಣ ಸುವರ್ಣ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಸಮುದಾಯದವರ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ಬ್ರಾಹ್ಮಣ ಸೇವಾ ಟ್ರಸ್ಟ್ ನ ಅಧ್ಯಕ್ಷ ಮುರಳೀಧರ ಭಟ್ಟಾಚಾರ್ಯ ಹೇಳಿದರು.
ಇಲ್ಲಿನ ಬ್ರಾಹ್ಮಣ ಸೇವಾ ಸಮುದಾಯಭವನದಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಬ್ರಾಹ್ಮಣ ಸಮುದಾಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಮತ್ತು ರಾಜಕೀಯವಾಗಿ ಬಲಗೊಳ್ಳಬೇಕು. ಹಿಂದಿನಿಂದಲೂ ಸರ್ಕಾರಗಳು ನಮ್ಮ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿವೆ ಎಂದರು.
ಇದರಿಂದಾಗಿ ನಾವು ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಸಮುದಾಯದವರೆಲ್ಲರೂ ಸಂಘಟಿತರಾಗಿ ನಮಗೆ ಸಿಗಬೇಕಾದಂತಹ ಸೌಲಭ್ಯಗಳಿಗಾಗಿ ಹೋರಾಟ ಮಾಡಬೇಕಾದಂತಹ ಅನಿವಾರ್ಯತೆ ಇದೆ ಎಂದರು.
ಕಾರ್ಯದರ್ಶಿ ಕುಮಾರಸ್ವಾಮಿ ಮಾತನಾಡಿ, ಎಲ್ಲಾ ಸಮುದಾಯಗಳ ಒಳಿತಿಗಾಗಿ ನಿರಂತರವಾಗಿ ಶ್ರಮಿಸುವಂತಹ ಬ್ರಾಹ್ಮಣ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಕೆಲ ಹಿರಿಯರು ಸುವರ್ಣಭವನ ನಿರ್ಮಾಣಕ್ಕೆ ದೇಣಿಗೆ ನೀಡುವುದಾಗಿ ತಿಳಿಸಿದರು.
ಖಜಾಂಚಿ ಸೂರ್ಯನಾರಾಯಣ ಬಾಬು, ನಿರ್ದೇಶಕರಾದ ರವಿಕುಮಾರ್, ಚಂದ್ರಮೌಳಿ, ಜಿ.ಸತೀಶ್ ಕುಮಾರ್, ವೀಣಾಪ್ರಕಾಶ್, ಹಿರಿಯರಾದ ಅಚ್ಚಣ್ಣ ಶಾಸ್ತ್ರೀ, ರಂಗನಾಥ್, ವಿಜಯಕುಮಾರ್, ಎ.ಎನ್.ರಾಮಚಂದ್ರಯ್ಯ, ಶಿಕ್ಷಕ ಅಶೋಕ್ ಕುಮಾರ್, ಭೀಮರಾವ್, ಶಂಕರ್ ರಾವ್, ಸಂಕರ್ಷಣ ಶರ್ಮ, ಸುಶೀಲಮ್ಮ ಹಾಜರಿದ್ದರು.
**
ಹಿರಿಯರ ಪರಿಶ್ರಮ
ಬಾಹ್ಮಣ ಸಂಘದ ಉಪಾಧ್ಯಕ್ಷ ಶೇಷಗಿರಿರಾವ್ ಮಾತನಾಡಿ, ಸಂಘವು 1967 ರಲ್ಲಿ ಪ್ರಾರಂಭವಾಗಿದ್ದು, ಸಮುದಾಯದ ಹಿರಿಯ ಪರಿಶ್ರಮದಿಂದಲೇ ಈ ಸಂಘ ಉಳಿದಿದೆ. ದಾನವಾಗಿ ನೀಡಿರುವ ನಿವೇಶನ ಸದ್ಬಳಕೆ ಮಾಡಬೇಕಾದಂತಹ ಜವಾಬ್ದಾರಿ ನಮ್ಮ ಮೇಲಿದ್ದು, 2017 ಕ್ಕೆ 50 ವರ್ಷಗಳು ಪೂರ್ಣಗೊಳ್ಳುವುದರಿಂದ ಇದರ ಅಂಗವಾಗಿ ಬ್ರಾಹ್ಮಣರ ಸುವರ್ಣ ಭವನ ನಿರ್ಮಾಣ ಮಾಡಬೇಕು ಎಂದರು.
**
ಬಾಹ್ಮಣ ಸಮುದಾಯಕ್ಕೆ ಪುನಃಶ್ಚೇತನ ನೀಡುವುದು ಅನಿವಾರ್ಯವಾಗಿದೆ. ಬದಲಾಗುತ್ತಿರುವ ಸಮಾಜ ಹಾಗೂ ಆಧುನಿಕತೆಗೆ ನಾವು ಒಗ್ಗಿಕೊಳ್ಳಬೇಕು.
-ಕುಮಾರಸ್ವಾಮಿ, ಬ್ರಾಹ್ಮಣ ಸಂಘದ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.