ದೇವನಹಳ್ಳಿ: ಅನ್ನ, ನೀರಿಲ್ಲದೆ 6 ದಿನಗಳ ಕಾಲ ಪಾಳು ಬಾವಿಯಲ್ಲಿದ್ದ 6 ವರ್ಷದ ಬಾಲಕಿಯೊಬ್ಬಳು ಆಶ್ಚರ್ಯ ರೀತಿಯಲ್ಲಿ ಬದುಕುಳಿದಿರುವ ಘಟನೆ ತಾಲ್ಲೂಕಿನ ವಿಜಯಪುರದಲ್ಲಿ ನಡೆದಿದೆ.
ಜ.7ರಂದು ವಿಜಯಪುರದ ಕೆರೆಕೋಡಿ ಬಳಿಯ ಅಂಗನವಾಡಿಗೆ ತೆರಳಿದ್ದ ವರ್ಷಿತ ಎಂಬ ಬಾಲಕಿ ಮನೆಗೆ ಹಿಂತಿರುಗಿರಲಿಲ್ಲ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಶುಕ್ರವಾರ (ಜ.13) ಕುರಿ ಮೇಯಿಸುವ ಕೆಲವರಿಗೆ ಕೆರೆಕೋಡಿ ಬಳಿಯ ಪಾಳು ಬಾವಿಯಲ್ಲಿ ಮಗುವಿನ ಧ್ವನಿ ಕೇಳಿ ಆಕೆಯನ್ನ ರಕ್ಷಿಸಿದ್ದಾರೆ.
ನಂತರ ಬಾಲಕಿ ಅಪಹರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಶನಿವಾರ ಅನುಮಾನದ ಆಧಾರದ ಮೇಲೆ ಸ್ಥಳೀಯ ನಿವಾಸಿ ಲಕ್ಷ್ಮಿ ಅಲಿಯಾಸ್ ಮೋಟಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಆಕೆ ಮಗುವನ್ನು ಅಪಹರಿಸಿ, ಚಿನ್ನಾಭರಣವನ್ನು ಕಸಿದು ಬಾವಿಗೆ ತಳ್ಳಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ವೃತ್ತ ನಿರೀಕ್ಷಕ ಕೇಶವ್, ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ತಿಳಿಸಿದ್ದಾರೆ.
ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.