ADVERTISEMENT

ವೇದ ಪದ್ಧತಿಯಲ್ಲಿ ಗಣಿತ ಕಲಿಕೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 5:35 IST
Last Updated 10 ಜುಲೈ 2012, 5:35 IST

ದೇವನಹಳ್ಳಿ: ವಿದ್ಯಾರ್ಥಿಗಳು ಗಣಿತವನ್ನು ಕಲಿಯಲು ವೇದಗಳ ಕಾಲದಲ್ಲಿ ರೂಢಿಯಲ್ಲಿದ್ದ ವೇದ ಮಾದರಿಯ ಗಣಿತ ಕಲಿಕೆ ಸರಳ ವಿಧಾನವಾಗಿದೆ ಎಂದು ವೇದ ಪದ್ಧತಿಯ ಗಣಿತ ಕಲಿಕೆಯಲ್ಲಿ ಗಿನ್ನೆಸ್ ದಾಖಲೆಗೆ ಪಾತ್ರರಾಗಿರುವ ದೆಹಲಿಯ ಮಹಮದ್ ಫೈಸಲ್ ತಿಳಿಸಿದರು.

ಇಲ್ಲಿನ ಆಕಾಶ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲಾ ಆರಂಭೋತ್ಸವ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ `ವೇದ ಪದ್ಧತಿ ವೇಗದಲ್ಲಿ ಗಣಿತ ನೆನಪು ಕಾರ್ಯಾಗಾರ~ದಲ್ಲಿ ಅವರು ಮಾತನಾಡಿದರು.

ಆಧುನಿಕ ಗಣಿತ ಪದ್ಧತಿಯಲ್ಲಿ ಬೀಜಗಣಿತ, ರೇಖಾಗಣಿತ, ಅಂಕಗಣಿತ ಎಂಬ ವಿಧಗಳಿವೆ. ಅವುಗಳಿಗೆ ಅದರದ್ದೇ ಆದ ಸೂತ್ರ ಹಾಗೂ ನಿಯಮಗಳಿವೆ. ಆದರೆ ವೇದ ಗಣಿತ ಪದ್ಧತಿಯಲ್ಲಿ ಯಾವುದೇ ಸೂತ್ರಗಳಿಲ್ಲ.

ವೇದ ಗಣಿತದಲ್ಲಿ ನೇರವಾಗಿ ಉತ್ತರಿಸಬಹುದು. ಆಧುನಿಕ ಗಣಿತ ಪದ್ಧತಿಯಿಂದ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಹಾಗೂ ಒತ್ತಡ ಉಂಟಾಗುವ ಜೊತೆಗೆ ಸಮಯದ ಅಭಾವವು ತಲೆದೋರುತ್ತದೆ. ವೇದ ಗಣಿತ ತೀರ ಸರಳ ವಿಧಾನವಾಗಿದ್ದು, ಪ್ರಾಥಮಿಕ ಹಂತದಲ್ಲೇ ರೂಢಿಸಿಕೊಂಡಲ್ಲಿ ಉಪಯೋಗವಾಗುತ್ತದೆ ಎಂದರು.

ಇಲ್ಲಿಯವರೆಗೆ ವಿದೇಶ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ 200ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನೀಡಿದ್ದು ಉತ್ತಮ ಫಲಿತಾಂಶ ಬಂದಿರುವುದಾಗಿ ಅವರು ತಿಳಿಸಿದರು.ಅಧ್ಯಕ್ಷತೆವಹಿಸಿದ್ದ ಶಾಲಾ ಆಡಳಿತ ಮಂಡಳಿ ಸಂಸ್ಥಾಪಕ ಕಾರ್ಯದರ್ಶಿ ಮುನಿರಾಜು, ಶಿಕ್ಷಣ ಕ್ಷೇತ್ರ ಅಗಾಧ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.