ಆನೇಕಲ್: ತಾಲ್ಲೂಕಿನ ಕೊಪ್ಪ ಗೇಟ್ ಸಮೀಪದ ತಪೋವನ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪ್ರಜಾ ವಿಮೋಚನಾ ಚಳವಳಿ (ಸಮತವಾದ) ಸಂಘಟನೆಯ ಕೊಪ್ಪ ಗೇಟ್ ರವಿ ಆರೋಪಿಸಿದ್ದಾರೆ.
ಶಾಲೆಯಲ್ಲಿ ಏಕಾಏಕಿ ಶುಲ್ಕ ಏರಿಕೆ ಮಾಡಿರುವುದನ್ನು ವಿರೋಧಿಸಿ ಪೋಷಕರು ಶುಕ್ರವಾರ ಶಾಲಾ ಆವರಣದಲ್ಲಿ ಸಭೆ ಸೇರಿ ಶುಲ್ಕ ಕಡಿಮೆ ಮಾಡುವಂತೆ ಶಾಲೆಯ ಆಡಳಿತ ಮಂಡಳಿಯನ್ನು ಕೋರಿ ಮಾತನಾಡಿದರು.
‘ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಹಿಂದೆಯೇ ದೂರು ನೀಡಲಾಗಿತ್ತು. ಅವರು ಸೂಚನೆ ನೀಡಿದರೂ ಆಡಳಿತ ಮಂಡಳಿ ಯಾವುದೇ ಕಿಮ್ಮತ್ತು ನೀಡದೇ ಉದ್ಧಟತನದಿಂದ ವರ್ತಿಸುತ್ತಿದೆ. ಶಾಲೆಯಲ್ಲಿ ವಸೂಲು ಮಾಡುವ ಶುಲ್ಕಕ್ಕೆ ಪೂರ್ಣ ರಸೀದಿ ಸಹ ನೀಡುವುದಿಲ್ಲ’ ಎಂದು ಆರೋಪಿಸಿದರು.
ಇದೇ ವೇಳೆಯಲ್ಲಿ ಸ್ಥಳದಲ್ಲಿದ್ದ ಪೋಷಕರೊಬ್ಬರು ಶಿಕ್ಷಕರು ಮಕ್ಕಳಿಗೆ ಸಲ್ಲದ ಶಿಕ್ಷೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನನ್ನ ಮಗುವನ್ನು ಈ ಶಾಲೆಯ ಶಿಕ್ಷಕರೊಬ್ಬರು ಈ ಹಿಂದೆ ಕಂಬಕ್ಕೆ ಕಟ್ಟಿ ಹಾಕಿ ಶಿಕ್ಷೆ ನೀಡಿದ್ದರು. ಈ ಬಗ್ಗೆ ನನ್ನ ಬಳಿ ಫೋಟೊಗಳು ಇವೆ ಎಂದು ದೂರಿದರು.
ಈ ಕುರಿತು ಶಾಲೆಯ ಆಡಳಿತ ಮಂಡಳಿಯವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ವಾಣಿ ಶರ್ಮ ಅವರು ಮಾತನಾಡಿ, ‘ಇದು ಮೂರು ನಾಲ್ಕು ತಿಂಗಳ ಹಿಂದಿನ ಘಟನೆ. ಕೆಲವರು ದುರುದ್ದೇಶದಿಂದ ಶಾಲೆಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.