ADVERTISEMENT

ಸರ್ಕಾರ ರೈತರ ನೆರವಿಗೆ ಧಾವಿಸಲಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 7:37 IST
Last Updated 2 ಡಿಸೆಂಬರ್ 2017, 7:37 IST
ಚನ್ನರಾಯಪಟ್ಟಣ ರಸ್ತೆಯಲ್ಲಿ ಧರ್ಮಪುರ ರೈತ ಪಿಳ್ಳೇಗೌಡ ಬೆಳೆದಿರುವ ಕಟಾವಿಗೆ ಬಂದಿರುವ ರಾಗಿ ಬೆಳೆ ಮಳೆಯಿಂದ ನೆಲಕ್ಕುರುಳುತ್ತಿರುವುದು
ಚನ್ನರಾಯಪಟ್ಟಣ ರಸ್ತೆಯಲ್ಲಿ ಧರ್ಮಪುರ ರೈತ ಪಿಳ್ಳೇಗೌಡ ಬೆಳೆದಿರುವ ಕಟಾವಿಗೆ ಬಂದಿರುವ ರಾಗಿ ಬೆಳೆ ಮಳೆಯಿಂದ ನೆಲಕ್ಕುರುಳುತ್ತಿರುವುದು   

ವಿಜಯಪುರ: ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣ, ಜಿಟಿ ಜಿಟಿ ಮಳೆ ಬೀಳುತ್ತಿರುವುದರಿಂದ ರೈತರಿಗೆ ತಾವು ಬೆಳೆದ ಬೆಳೆ ಕೈಗೆ ಬರುತ್ತೋ ಇಲ್ಲವೋ ಎಂಬಂತಾಗಿದ್ದು, ಸರ್ಕಾರ ಪ್ರಕೃತಿ ವಿಕೋಪದಡಿಯಲ್ಲಿ ರೈತರ ನೆರವಿಗೆ ಬರಬೇಕು ಎಂದು ರೈತರಾದ ಧರ್ಮಪುರ ಪಿಳ್ಳೇಗೌಡ, ಹನುಮಂತಪ್ಪ, ಅಶೋಕ್ ಒತ್ತಾಯಿಸಿದರು.

ಸತತವಾಗಿ ನಾಲ್ಕು ವರ್ಷಗಳಿಂದ ತೀವ್ರ ಬರಗಾಲದಿಂದ ತತ್ತರಿಸಿದ್ದ ಬಯಲು ಸೀಮೆಯ ರೈತರ ಪಾಲಿಗೆ ಜುಲೈ, ಆಗಸ್ಟ್ ತಿಂಗಳಿನಲ್ಲಿ ಬಿದ್ದ ಮಳೆ ಆಸರೆಯಾಗಿತ್ತು. ರಾಗಿಯ ಬಿತ್ತನೆ ಉತ್ತಮವಾಗಿತ್ತು. ಬೆಳೆಗಳು ಉತ್ತಮವಾಗಿ ಆಗಿದ್ದರೂ ಮೂರು ತಿಂಗಳ ಕಾಲ ಕಷ್ಟಪಟ್ಟು ಬೆಳೆದಿರುವ ಬೆಳೆಗಳನ್ನು ಕಟಾವು ಮಾಡಿಕೊಂಡು ಮನೆಗೆ ಒಯ್ಯುವ ನೆಮ್ಮದಿಯಿಲ್ಲದಂತಾಗಿದೆ.

ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿ ರಾಗಿ ಬೆಳೆಯು ನೆಲಕ್ಕುರುಳಿ ಬಿದ್ದಿರುವುದರಿಂದ ಕಟಾವು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಟಾವು ಮಾಡಿದರೂ ರಾಗಿಯನ್ನು ಒಣಗಿಸಲು ಸಾಧ್ಯವಿಲ್ಲದ ಕಾರಣ ರೈತರ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಮೂರು ವರ್ಷಗಳಲ್ಲಿ ಸತತವಾಗಿ ಒಂದು ತಿಂಗಳ ಕಾಲ ಮಳೆಯಾಗಿ\ದ್ದರಿಂದ ಹೊಲಗಳಲ್ಲಿ ಬೆಳೆದಿದ್ದ ರಾಗಿಯೆಲ್ಲ ಮೊಳಕೆಯೊಡೆದು ನಾಶವಾಗಿತ್ತು. ಈ ಬಾರಿ ಉತ್ತಮ ಬೆಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದರೂ ಮೋಡ ಮುಸುಕಿದ ವಾತಾವರಣ ಹಾಗೂ ಜಿಟಿ, ಜಿಟಿ ಮಳೆಯಾಗುವುದು ತಲೆನೋವಾಗಿ ಪರಿಣಮಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಸಾಕಷ್ಟು ಮಂದಿ ರೈತರು ದ್ರಾಕ್ಷಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಮೋಡ ಕವಿದ ವಾತಾವರಣ, ಹಾಗೂ ಜಿಟಿ ಜಿಟಿ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಕಟಾವಾದ ನಂತರ ಚಿಗುರೊಡೆದಿರುವ ದ್ರಾಕ್ಷಿ ಬೆಳೆ ಪಾಲಿನೇಷನ್ (ಹೂವಿನಿಂದ ಕಾಯಿಯಾಗಿ ಮಾರ್ಪಡುವುದು) ಆಗುತ್ತಿರುವ ತೋಟಗಳಿಗೆ ತೊಂದರೆಯಾಗುತ್ತಿದೆ. ಔಷಧಿ ಸಿಂಪಡಣೆ ಮಾಡಲು ಆಗುತ್ತಿಲ್ಲ ಎಂದು ರೈತರಾದ ವೆಂಕಟೇಶ್, ಶ್ರೀನಿವಾಸ್, ನಂಜಪ್ಪ ಹೇಳಿದರು.

ದ್ರಾಕ್ಷಿ ಬೆಳೆಗಾರರಿಗೆ ಸಂಕಷ್ಟ

ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಆಗಿದ್ದರಿಂದ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ. ಇಂಥ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ರೋಗ ಕಟ್ಟಿಟ್ಟ ಬುತ್ತಿ. ಸಾಲದೆಂಬಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಳೆಯಾಗಿದ್ದು, ಬೆಳೆಗಾರರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಮೋಡ ಕವಿದ ವಾತಾವರಣ ಮುಂದುವರಿದರೆ, ದ್ರಾಕ್ಷಿ ಬೆಳೆಗಾರರು ಸಂಪೂರ್ಣ ನೆಲಕಚ್ಚಿದಂತೆಯೇ. ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಸುರಿದ ವ್ಯಾಪಕ ಮಳೆಗೆ ಶೇ 30ರಷ್ಟು ಬೆಳೆ ಹಾನಿಯಾಗಿತ್ತು. ದ್ರಾಕ್ಷಿಯ ಬೆಲೆಯು ಗಣನೀಯವಾಗಿ ಇಳಿಮುಖವಾಗಿತ್ತು. ಅ. 17ರ ಬಳಿಕ ಮಳೆ ಸಂಪೂರ್ಣ ಬಿಡುವು ನೀಡಿತ್ತು. ಶುಭ್ರ ಆಕಾಶವಿದ್ದುದರಿಂದ ಈ ತಿಂಗಳ ಅವಧಿಯಲ್ಲಿ ದ್ರಾಕ್ಷಿ ಬೆಳೆ ಚೇತರಿಸಿಕೊಂಡಿತ್ತು. ಬೆಳೆ ಚೇತರಿಸಿಕೊಳ್ಳುವ ಹೊತ್ತಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.