ADVERTISEMENT

‘ಸದ್ಬಳಕೆಯಾಗದ ಅಂಗವಿಕಲರ ಅನುದಾನ ’

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2016, 6:30 IST
Last Updated 6 ಆಗಸ್ಟ್ 2016, 6:30 IST
ದೇವನಹಳ್ಳಿ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕು ಅಂಗವಿಕಲರ ಕುಂದು ಕೊರತೆ ಸಭೆ ಶಿರಸ್ತೇದಾರ್‌ ರಾಘವೇಂದ್ರನ್‌ ಹಾಗೂ ಸಿಡಿಪಿಒ ಅಶ್ವಥಮ್ಮ ನೇತೃತ್ವದಲ್ಲಿ ನಡೆಯಿತು
ದೇವನಹಳ್ಳಿ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕು ಅಂಗವಿಕಲರ ಕುಂದು ಕೊರತೆ ಸಭೆ ಶಿರಸ್ತೇದಾರ್‌ ರಾಘವೇಂದ್ರನ್‌ ಹಾಗೂ ಸಿಡಿಪಿಒ ಅಶ್ವಥಮ್ಮ ನೇತೃತ್ವದಲ್ಲಿ ನಡೆಯಿತು   

ದೇವನಹಳ್ಳಿ: ದೇವನಹಳ್ಳಿ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕು ಅಂಗವಿಕಲರ ಕುಂದು ಕೊರತೆ `ಸಭೆ ಶಿರಸ್ತೇದಾರ್‌ ರಾಘವೇಂದ್ರನ್‌ ಹಾಗೂ ಸಿಡಿಪಿಒ ಅಶ್ವಥಮ್ಮ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಸದಸ್ಯ ಕಾರ್ಯದರ್ಶಿ ಎಂ.ಮಂಜುನಾಥ್‌, ಅಂಗವಿಕಲರ ಸಮಸ್ಯೆಗೆ ಪ್ರತಿ ತಿಂಗಳು ಸಭೆ ನಡೆಸಿ ಕುಂದುಕೊರತೆ ಆಲಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಬೇಕು. ಇಲಾಖೆ ಅಧಿಕಾರಿಗಳು ಮೂರು ನಾಲ್ಕು ತಿಂಗಳಾದರೂ ಸಭೆ ನಡೆಸುತ್ತಿಲ್ಲ.

ಅಂಗವಿಕಲರ ಸಮಸ್ಯೆ ಆಲಿಸುವರೇ ಇಲ್ಲದಂತಾಗಿದೆ. ಅಂಗವಿಕಲರಿಗೆ ಮೀಸಲಿಟ್ಟ ಶೇ.3ರಷ್ಟು ಅನುದಾನ ಸದ್ಬಳಕೆಯಾಗುತ್ತಿಲ್ಲ. ಗ್ರಾ.ಪಂ. ಸೇರಿ ದಂತೆ ಎಲ್ಲಾ ಇಲಾಖೆಗಳು ನಿರ್ಲಕ್ಷ್ಯ ತೋರಿವೆ. ಅಯ್ಯೋಪಾಪ ಎಂದರೆ ನಮ್ಮ ಸಮಸ್ಯೆಗಳು ಈಡೇರುತ್ತವೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಒಂದುವರೆ ವರ್ಷದಿಂದ ಅಂಗವಿಕಲರಿಗೆ ತಾಲ್ಲೂಕು ಕೇಂದ್ರದಲ್ಲಿ ಸಮುದಾಯಭವನಕ್ಕಾಗಿ ನಿವೇಶನ ಗುರುತಿಸುವಂತೆ ಮನವಿ ಮಾಡಿ, ಜಿಲ್ಲಾಧಿಕಾರಿಗಳಿಗೆ ಕಡತ ರವಾನಿಸಲಾಗಿದೆ. ಜಿಲ್ಲಾಧಿಕಾರಿಯವರು ಸ್ಥಳ ಗುರುತಿಸಿ ನಿವೇಶನದ ಸಾಧಕ ಬಾಧಕದ ಬಗ್ಗೆ ಪರಿಶೀಲಿಸಿ ವರದಿ ನೀಡಿ ಎಂದು ಆದೇಶ ನೀಡಿದ್ದರು.

ಕಂದಾಯ ಇಲಾಖೆ ಅಧಿಕಾರಿಗಳು ಕಡತವನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಕಚೇರಿಗಳಿಗೆ ಅಲೆದು ಸಾಕಾಗಿದೆ. ಮಿನಿ ವಿಧಾನಸೌಧ ಮೂರು ಅಂತಸ್ಥಿನ ಕಟ್ಟಡವಾಗಿರು ವುದರಿಂದ ಅಂಗವಿ ಕಲರು ವಿವಿಧ ಕೊಠಡಿಗಳಿಗೆ ತೆರಳಲು ಆಸಕ್ತರಾಗಿದ್ದರೆ ಎಂದರು.

ತಾಲ್ಲೂಕು ಅಂಗವಿಕಲರ ಸಂಘ ಅಧ್ಯಕ್ಷ ಸುರೇಶ್‌ ಅಯ್ಯರ್‌ ಮಾತನಾಡಿ, ಶೇ.75 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರಿಗೆ ₹ 1300, ಶೇ.40 ರಿಂದ 75 ರಷ್ಟು ಹೊಂದಿರುವವರಿಗೆ ₹ 500 ಸಾಮಾಜಿಕ ಭದ್ರತೆಯಡಿ ಮಾಶಾಸನ ನೀಡಲಾಗುತ್ತಿದೆ.

ಇದು ಸಮರ್ಪಕವಾಗಿ ಸಕಾಲದಲ್ಲಿ ಆಗುತ್ತಿಲ್ಲ. ಅಂಗವಿಕಲ ವೇತನ ಪಡೆಯಲು ಅಂಗವಿಕಲರ ದೃಢೀಕರಣ ಪತ್ರದ ನಕಲು ನೀಡಿದರೆ ಸಾಕು ಆದಾಯ, ಜಾತಿ ಪ್ರಮಾಣ ಪತ್ರದ ಅವಶ್ಯಕತೆ ಯಾಕೆ ಎಂದರು.

ಶಿರಸ್ತೇದಾರ್‌ ರಾಘವೇಂದ್ರ ಮಾತನಾಡಿ, ನಿವೇಶನಕ್ಕೆ ಖಾಸಗಿಯೊಬ್ಬರು ತಕರಾರು ಅರ್ಜಿ ಸಲ್ಲಿಸಿದ್ದಾರೆ, ಅದು ಪುರಸಭೆ ವ್ಯಾಪ್ತಿಯಲ್ಲಿ ದಾಖಲೆ ಇದೆ. ಲಿಫ್ಟ್‌ ಅಳವಡಿಸುವ ಬಗ್ಗೆ ಕಳೆದ ಆರು ತಿಂಗಳ ಹಿಂದೆ ಕಾಮಗಾರಿ ಕ್ರಿಯಾಯೋಜನೆ ಆಗಿದ್ದರೂ ನೂತನವಾಗಿ ಮತ್ತೆ ಕ್ರಿಯಾಯೋಜನೆ ಆಗಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.