ADVERTISEMENT

ಸಮಗ್ರ ವೈದ್ಯಕೀಯ ಪದ್ದತಿ ಜಾರಿ–ನಡ್ಡಾ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 8:38 IST
Last Updated 7 ಜನವರಿ 2018, 8:38 IST

ಆನೇಕಲ್‌ : ದೇಶದ ಎಲ್ಲಾ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಗಳಲ್ಲೂ ಆಯುಷ್ ವಿಭಾಗಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು ಸಮಗ್ರ ವೈದ್ಯಕೀಯ ಪದ್ದತಿಯನ್ನು ಎಲ್ಲೆಡೆ ಅಳವಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಜೆ.ಪಿ.ನಡ್ಡಾ ತಿಳಿಸಿದರು.

ಅವರು ತಾಲ್ಲೂಕಿನ ಜಿಗಣಿ ಸಮೀಪದ ಎಸ್‌–ವ್ಯಾಸ ಯೋಗ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 22ನೇ ಅಂತರರಾಷ್ಟ್ರೀಯ ಯೋಗ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಲೋಪಥಿ ಹಾಗೂ ಆಯುಷ್‌ನ ಒಳ್ಳೆಯ ಅಂಶಗಳನ್ನು ಒಗ್ಗೂಡಿಸಿ ಸಮಗ್ರ ಆರೋಗ್ಯ ಪದ್ದತಿ ರೂಪಿಸಬೇಕಾಗಿದೆ. ಒಳ್ಳೆಯ ಅಂಶಗಳ ದಾಖಲೀಕರಣ ಅಗತ್ಯವಿದೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಆಯುರ್ವೇದ, ಸಿದ್ಧ, ಯುನಾನಿ, ಹೋಮಿಯೋಪಥಿ, ಅಲೋಪಥಿ ಸೇರಿದಂತೆ ವಿವಿಧ ವೈದ್ಯಕೀಯ ಪದ್ದತಿಗಳ ಸಂಶೋಧನೆ ಮತ್ತು ದಾಖಲೀಕರಣಕ್ಕಾಗಿ ಕೇಂದ್ರವೊಂದನ್ನು  ಪ್ರಾರಂಭಿಸಲಾಗುವುದು ಎಂದರು.

ADVERTISEMENT

ಕೇಂದ್ರ ಸಚಿವ ಅನಂತ್‌ಕುಮಾರ್ ಮಾತನಾಡಿ ಕ್ಯಾನ್ಸರ್‌ನಂತಹ ಮಾರಕ ರೋಗಗಳನ್ನು ತಡೆಯುವ ದಿಸೆಯಲ್ಲಿ ಅಂತರರಾಷ್ಟ್ರೀಯ ಜಾಗೃತಿಯ ಅವಶ್ಯಕತೆಯಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್, ಎಸ್‌–ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ, ಡಾ.ರಾಮಚಂದ್ರ.ಜಿ.ಭಟ್, ಆರೋಗ್ಯ ವಿಭಾಗದ ನಿರ್ದೇಶಕಿ ಡಾ.ಎಚ್.ಆರ್.ನಾಗರತ್ನ, ಗುರೂಜಿ ಮಹೇಶ್ವರಾನಂದ, ಡಾ.ಮಂಜುನಾಥ್, ಡಾ.ಗಂಗಾಧರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.