ದೊಡ್ಡಬಳ್ಳಾಪುರ: ಮದ್ಯದಂಗಡಿಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ಎಂಬ ನಿಯಮ ಮಾಡಿದ ನಂತರ ರಸ್ತೆ ಬದಿಗಳಲ್ಲಿ, ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಕಾಣಸಿಗುತ್ತಿವೆ. ಮದ್ಯ ಖರೀದಿಸಿದವರು ಮನೆಗೆ ಒಯ್ಯದೇ ಮಾರ್ಗ ಮಧ್ಯದಲ್ಲಿಯೇ ಸೇವಿಸಿ ಮದ್ಯದ ಬಾಟಲ್, ಪಾಕೆಟ್ ಹಾಗೂ ಲೋಟಗಳನ್ನು ಬಿಸಾಡುತ್ತಿದ್ದಾರೆ.
ನಗರದ ಬಸ್ ನಿಲ್ದಾಣದ ಸುತ್ತಮುತ್ತಲಿನ ಮದ್ಯದಂಗಡಿಗಳಲ್ಲಿ ಮದ್ಯ ಖರೀದಿಸಿ ಸಮೀಪದ ಗಾಂಧಿನಗರದ ರಸ್ತೆ ಬದಿ ಅಂಗಡಿಗಳ ಮುಂಭಾಗ ಹಾಗೂ ಮನೆಗಳ ಮುಂದೆಯೇ ಮದ್ಯದ ಬಾಟಲ್ಗಳನ್ನು ಬಿಸಾಡುತ್ತಿದ್ದಾರೆ. ಆಂಜನೇಯಸ್ವಾಮಿ ದೇವಾಲಯ, ಸರ್ಕಾರಿ ಆಸ್ಪತ್ರೆಗಳ ಬಳಿ ತ್ಯಾಜ್ಯ ಹೆಚ್ಚಾಗಿದೆ. ಇದು ಮಹಿಳೆಯರು– ಮಕ್ಕಳು ಓಡಾಡುವ ಪ್ರದೇಶವಾಗಿದೆ. ರಸ್ತೆ ಬದಿಯ ಚರಂಡಿಗಳಲ್ಲಿಯೂ ಸಹ ಮದ್ಯದ ಪಾಕೆಟ್ಗಳು ರಾಶಿ ಬೀಳುತ್ತಿವೆ.
ಮದ್ಯ ಸೇವಿಸಿ ಓಡಾಡುತ್ತಿರುವವರಿಂದಲೂ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುತ್ತಿದೆ. ಈ ದಿಸೆಯಲ್ಲಿ ನಗರಸಭೆ ಅಧಿಕಾರಿಗಳುಬಿಸಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ಬಿದ್ದಿರುವ ಮದ್ಯದ ಬಾಟಲ್ ಕಸವನ್ನು ತೆರವು ಮಾಡಬೇಕು. ಸಾರ್ವಜನಿಕರು ಕಸ ಹಾಕಲು ಕಸದ ತೊಟ್ಟಿಗಳನ್ನು ಇಡಬೇಕು. ಸಾರ್ವಜನಿಕ ಸ್ಥಳದಲ್ಲಿ ಎಲ್ಲಂದರಲ್ಲಿ ಮದ್ಯ ಸೇವಿಸದಂತೆ ಪೊಲೀಸರು ತಾಕೀತು ಮಾಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.