ADVERTISEMENT

ಸ್ತ್ರೀಯರಿಗೆ ಲೆಕ್ಕಪತ್ರ ನಿರ್ವಹಣೆ ತರಬೇತಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 5:15 IST
Last Updated 26 ನವೆಂಬರ್ 2020, 5:15 IST
ಬ್ಯಾಂಕ್‌ ಆಫ್‌ ಬರೋಡದ ನಗರ ಶಾಖೆಯ ವ್ಯವಸ್ಥಾಪಕ ಅಶ್ವತ್ಥ್‌ನಾರಾಯಣ ಮಾತನಾಡಿದರು
ಬ್ಯಾಂಕ್‌ ಆಫ್‌ ಬರೋಡದ ನಗರ ಶಾಖೆಯ ವ್ಯವಸ್ಥಾಪಕ ಅಶ್ವತ್ಥ್‌ನಾರಾಯಣ ಮಾತನಾಡಿದರು   

ದೊಡ್ಡಬಳ್ಳಾಪುರ: ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡುವಾಗ ಇರುವಷ್ಟೇ ಕಾಳಜಿ ಹಣಕಾಸಿನ ನಿರ್ವಹಣೆ ಮಾಡುವಾಗಲು ವಹಿಸಬೇಕು ಎಂದು ಬ್ಯಾಂಕ್‌ ಆಫ್‌ ಬರೋಡದ ನಗರ ಶಾಖೆಯ ವ್ಯವಸ್ಥಾಪಕ ಅಶ್ವತ್ಥ್‌ನಾರಾಯಣ ಹೇಳಿದರು.

ನಗರದ ಕನ್ನಡ ಜಾಗೃತ ಪರಿಷತ್‌ ಭವನದಲ್ಲಿ ಮಂಗಳವಾರ ದಾನ್‌ ಫೌಂಡೇಷನ್‌ ರಾಮನಗರ ವಲಯದಿಂದ ನಡೆದ ದೊಡ್ಡಬಳ್ಳಾಪುರ ಮಹಿಳಾ ಕಳಂಜಿ ಒಕ್ಕೂಟದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಕಳಂಜಿ ಸಂಘದ ಮಾರ್ಗದರ್ಶನದಲ್ಲಿ ರಚನೆಯಾಗಿರುವ ಸ್ವಸಹಾಯ ಸಂಘಗಳಿಗೆ ಆರ್ಥಿಕ ನಿರ್ವಹಣೆ, ಲೆಕ್ಕಪತ್ರ ಬರೆಯುವುದು ಸೇರಿದಂತೆ ಸಾಕಷ್ಟು ತರಬೇತಿ ನೀಡಲಾಗುತ್ತದೆ. ಇದಾದ ನಂತರವೇ ಮಹಿಳಾ ಗುಂಪುಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ ಎಂದರು.

ADVERTISEMENT

ಮಹಿಳಾ ಗುಂಪುಗಳು ನಿರ್ದಿಷ್ಟ ಗುರಿ ಹೊಂದಿರಬೇಕು. ಆಗ ಮಾತ್ರ ಯಶಸ್ಸು ಸಾಧ್ಯ. ಸಂಘಗಳು ಬ್ಯಾಂಕಿನಿಂದ ಸಾಲ ಪಡೆಯುವುದಕ್ಕೇ ಮಾತ್ರ ಸೀಮಿತವಾಗದೆ ಕೌಶಲ ತರಬೇತಿ ಪಡೆದು ಸ್ವಯಂ ಉದ್ಯೋಗಿಗಳಾಗುವ ಕಡೆಗೆ ಮುನ್ನಡೆಯಬೇಕು. ಸಾಲ ಸೌಲಭ್ಯ ಪಡೆಯುವಾಗ ಗುಂಪಿನಲ್ಲಿ ಎಲ್ಲರೂ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಹೊರಗಿನವರು ಸಂಘದ ಹಣಕಾಸಿನ ವಿಚಾರದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.

ಬೆಂಗಳೂರಿನ ನಾರಾಯಣ ಆಸ್ಪತ್ರೆಯ ಸಿಎಸ್‌ಆರ್‌ ವಿಭಾಗದ ಮುತ್ತುರಾಜ್‌ ಮಾತನಾಡಿ, ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸ್‌ರ್‌ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ದಾನ್‌ ಫೌಂಡೇಷನ್‌ ರಾಮನಗರ ವಲಯದ ಸಂಯೋಜಕಿ ನಾಗರತ್ನಾ, ಸುಕನ್ಯಾ, ಮುಲಿನ್‌ತಾಜ್‌, ಕೆಂಪಮ್ಮ, ನರಸಿಂಹಮೂರ್ತಿ, ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.