ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಎಂಟು ತಿಂಗಳ ಸಿಂಹದ ಮರಿಯೊಂದನ್ನು ನಟ ವಸಿಷ್ಠಸಿಂಹ ಪಡೆದಿದ್ದು ಮರಿಗೆ ವಿಜಯ ನರಸಿಂಹ ಎಂದು ನಾಮಕರಣ ಮಾಡಿದ್ದಾರೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದರು.
ಅವರು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದ ದತ್ತು ಸ್ವೀಕಾರ ಮತ್ತು ಮರಿಗೆ ನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಟರೊಬ್ಬರು ಪ್ರಾಣಿ ದತ್ತು ಪಡೆದಿರುವುದು ಇದೇ ಮೊದಲು. ಈ ಮೂಲಕ ಮತ್ತಷ್ಟು ಜನರು ವನ್ಯಜೀವಿ ಸಂರಕ್ಷಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ
ಎಂದರು.
ಕೊರೊನಾ ಸಂದರ್ಭದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಆದಾಯ ಸಂಪೂರ್ಣ ಕುಸಿದಿತ್ತು. ಈ ಸಂದರ್ಭದಲ್ಲಿ 191 ಮಂದಿ ಪ್ರಾಣಿಗಳನ್ನು ದತ್ತು ಪಡೆದುಕೊಳ್ಳುವ ಮೂಲಕ ಸುಮಾರು ₹30ಲಕ್ಷ ಆದಾಯ ಬರಲು ನೆರವಾಗಿದ್ದರು ಎಂದರು.
ನಟ ವಸಿಷ್ಠಸಿಂಹ ಮಾತನಾಡಿ, 2020ರ ಏ.24ರಂದು ಸಾನಿಯಾ ಮತ್ತು ರಾಮು ಜೋಡಿಗೆ ಜನಿಸಿದ್ದ ಸಿಂಹದ ಮರಿ ದತ್ತು ಪಡೆದಿದ್ದೇನೆ. ಏ.24 ಡಾ.ರಾಜ್ಕುಮಾರ್ ಅವರ ಜನ್ಮ ದಿನವಾಗಿರುವುದು ದತ್ತು ಪಡೆಯಲು ಪ್ರೇರಣೆ ನೀಡಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದಾಗ ದತ್ತು ಪಡೆಯಲು ನಿರ್ಧರಿಸಿದ್ದೆ. ಅದರಂತೆ ಸಿಂಹದ ಮರಿ ದತ್ತು ಪಡೆಯಲಾಗಿದೆ. ವನ್ಯ ಜೀವಿಗಳ ಸಂರಕ್ಷಣೆ ಸಮಾಜದ ಜವಬ್ದಾರಿಯಾಗಿದೆ. ಈ ಕಾರ್ಯದಲ್ಲಿ ಕೈಜೋಡಿಸಿರುವುದು ಸಂತಸವಾಗಿದೆ ಎಂದರು.
ಶುಕ್ರವಾರ ನಡೆದ ದತ್ತು ಕಾರ್ಯಕ್ರಮದಲ್ಲಿ ವಿನಯ್ ಲಕ್ಷ್ಮಣ್ ಎಂಬುವವರು ಚಿರತೆಯೊಂದನ್ನು ಮತ್ತು ವಿಜಯ್ ರಾಜ್ ಎಂಬುವವರು ಕಿಂಗ್ ಕೋಬ್ರಾವೊಂದನ್ನು ದತ್ತು ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.