ದೊಡ್ಡಬಳ್ಳಾಪುರ:‘ಕೋವಿಡ್ನಿಂದಾಗಿ ಹೆತ್ತವರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳ ರಕ್ಷಣೆ, ಪೋಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆ ಘೋಷಿಸಿವೆ. ಇಂತಹ ಮಕ್ಕಳಿದ್ದರೆ ಕೂಡಲೇ ಸಂಬಂಧಿಕರು ಅಧಿಕಾರಿಗಳಿಗೆ ತಿಳಿಸಬೇಕು’ ಎಂದು ಡಿವೈಎಸ್ಪಿ ಟಿ. ರಂಗಪ್ಪ ಹೇಳಿದರು.
ನಗರದ ಗಂಗಾಧರಪುರ ಬಡಾವಣೆಯಲ್ಲಿ ಜನಸಹಾಯ ಕೆಸಿವಿಟಿ ಹಾಗೂ ಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಸಂಸ್ಥೆಯಿಂದ ನಡೆದ ಆರೋಗ್ಯ ತಪಾಸಣೆ ಹಾಗೂ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರ ಅನಾಥವಾದ ಮಕ್ಕಳಿಗಾಗಿ ಬಾಲಸೇವಾ ಯೋಜನೆ ಪ್ರಕಟಿಸಿದೆ. ಮಾಸಿಕ ₹ 3,500 ಸಹಾಯಧನ ನೀಡಲಿದೆ. ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳಿಗೆ ಹೆತ್ತವರು ಇಲ್ಲದಿದ್ದಲ್ಲಿ ಅಂಥವರನ್ನು ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲಿಸಿ ಆರೈಕೆ ಮಾಡಲಾಗುವುದು ಎಂದರು.
ತಹಶೀಲ್ದಾರ್ ಟಿ.ಎಸ್. ಶಿವರಾಜು ಮಾತನಾಡಿ, ಕೊರೊನಾ ಎದುರಿಸಲು ನಮ್ಮಲ್ಲಿನ ಆತ್ಮಸ್ಥೈರ್ಯ, ಧನಾತ್ಮಕ ಮನೋಭಾವವೇ ಏಕೈಕ ಮಾರ್ಗವಾಗಿದೆ. ಯಾವುದೇ ದೊಡ್ಡ ಆಸ್ಪತ್ರೆ, ಲಕ್ಷಗಟ್ಟಲೆ ಖರ್ಚು ಮಾಡಿದರು ಕೊನೆಗೆ ನಮ್ಮೊಳಗಿನ ಧೈರ್ಯವೇ ನಮ್ಮ ಜೀವ ಉಳಿಸುವುದು. ಹೀಗಾಗಿ ಯಾವೊಬ್ಬ ಕೊರೊನಾ ಸೋಂಕಿತ ವ್ಯಕ್ತಿಯೂ ಎದೆಗುಂದಬಾರದು ಎಂದರು.
ಕೆಸಿವಿಟಿ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ ಮಾತನಾಡಿದರು. ಮುಖಂಡರಾದ ಡಾ.ಶೇಖ್ ಸೆಹ್ರಾನ್, ನವೀನ್ಕುಮಾರ್, ಲೋಕೇಶ್, ಛಲವಾದಿ ಸುರೇಶ್, ಸಾಬೀರ್, ಜಗನ್ನಾಥ, ಮುತ್ತುರಾಜು, ಗಂಗಾಧರ್, ನವೀದ್, ಭರತ್, ಶಂಕರ್, ಪ್ರಕಾಶ್, ಆಶಾ ಕಾರ್ಯಕರ್ತೆಯರಾದ ಮಂಜುಳಾ, ಮುನಿರತ್ನಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.