
ಆನೇಕಲ್: ತಾಲ್ಲೂಕಿನ ಹೆನ್ನಾಗರ ನಾಗೇಶ್ವರ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಜಾತ್ರೆ ಮಹೋತ್ಸವ ಪ್ರಯುಕ್ತ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ನಾಗಲಿಂಗೇಶ್ವರ ಉತ್ಸವ ಮೂರ್ತಿಯನ್ನು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥದಲ್ಲಿ ಕುಳ್ಳರಿಸಲಾಯಿತು. ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಗುಮ್ಮಳಾಪುರ ಸಂಸ್ಥಾನ ಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಲಂಕೃತ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಸಂಚರಿಸಿತು. ಭಕ್ತರು ದವನ ಚುಚ್ಚಿದ ಬಾಳೆ ಹಣ್ಣು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ರಥೋತ್ಸವ ಅಂಗವಾಗಿ ಹೆನ್ನಾಗರದ ನಾಗಲಿಂಗೇಶ್ವರ, ಯಲ್ಲಮ್ಮದೇವಿ ಮತ್ತು ಗದ್ದುಗೆ ಶ್ರೀ ಜ್ಯೋತಿಲಿಂಗೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಮಹಿಳಾ ವೀರಗಾಸೆ, ಗಾರುಡಿ ಗೊಂಬೆ, ನಂದಿಧ್ವಜ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು. ರಥೋತ್ಸವ ಪ್ರಯುಕ್ತ ಯಲ್ಲಮ್ಮದೇವಿ ದೀಪಾರತಿ ವೈಭವದಿಂದ ನಡೆಯಿತು. ನೂರಾರು ಮಂದಿ ಭಕ್ತರು ಬೆಲ್ಲದಾರತಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಿಗೆ ಸಮರ್ಪಿಸಿದರು.
ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಲಕ್ಷ್ಮಿನಾಗೇಶ್, ಮುಖಂಡರಾದ ಎಚ್.ಜೆ.ಪ್ರಸನ್ನಕುಮಾರ್, ಸತೀಶ್, ಶ್ರೀನಿವಾಸ್, ಪುಷ್ಪರಾಜಶೇಖರ್, ಮುನಿರತ್ನಮ್ಮ ಮುನಿರಾಜು, ಲೋಕನಾಥ್, ಕಿರಣ್, ಆರ್.ಎಸ್.ಪ್ರಕಾಶ್, ನಟರಾಜ್, ಲಲಿತಾ ರಾಜು, ನಾಗರಾಜು, ಕುಮಾರ್, ರಾಮಸ್ವಾಮ, ಬಸವರಾಜಯ್ಯ, ನಾಗೇಶಪ್ಪ, ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.