
ಆನೇಕಲ್: ಪಟ್ಟಣದ ಬನ್ನೇರುಘಟ್ಟ ರಸ್ತೆಯ ಶನೇಶ್ವರ ಸ್ವಾಮಿ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ 42ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ ಶನಿವಾರ ನಡೆಯಿತು. ಶಿವರಾತ್ರಿ ಮಹೋತ್ಸವದ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದರು.
ಪಟ್ಟಣದ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶನಿವಾರ ಬೆಳಗಿನಿಂದಲೂ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ಸಂಜೆ 3ರ ಸುಮಾರಿಗೆ ಶನೇಶ್ವರ ಸ್ವಾಮಿ, ಭವಾನಿ ಚಂದ್ರಶೇಖರ ಸ್ವಾಮಿ ಮತ್ತು ರಾಘವೇಂದ್ರ ಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಚಮ್ಮೇಳ, ಚಂಡೆ, ವೀರಗಾಸೆ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ವೈಭವದ ಮೆರವಣಿಗೆಗೆ ಮೆರುಗು ನೀಡಿದವು. ಆಂಜನೇಯ, ನರಸಿಂಹಸ್ವಾಮಿ ವೇಷಧಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕರಡಿ ವೇಷ ಧರಿಸಿದ್ದ ಕಲಾವಿದರೊಂದಿಗೆ ಮಕ್ಕಳು ಕುಣಿದು ಸಂಭ್ರಮಿಸಿದರು.
ಪಟ್ಟಣದ ಚರ್ಚ್ ರಸ್ತೆ, ಜಯಲಕ್ಷ್ಮಿ ಚಿತ್ರಮಂದಿರ, ದೇವರಕೊಂಡಪ್ಪ ವೃತ್ತ, ಗಾಂಧಿ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಡೋಲು ಮುನಿರಾಜು ನೇತೃತ್ವದದ 25ಕ್ಕೂ ಹೆಚ್ಚು ಮಂದಿ ಕಲಾವಿದರು ನಾದಸ್ವರ ಡೋಲು ಕಚೇರಿ ನೀಡಿದರು. ಉಮೇಶ್ ಶಾಸ್ತ್ರೀ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶಿವರಾತ್ರಿ ಪ್ರಯುಕ್ತ ಫೆ.15ರಂದು ಸ್ವಾಮಿಗೆ ಅಭಿಷೇಕ, ದೇವಾಲಯದಲ್ಲಿ ಮುರುಡೇಶ್ವರ ಮಾದರಿಯ ಈಶ್ವರ ಪ್ರತಿಮೆಯ ಪ್ರದರ್ಶನ, ರಾತ್ರಿ 9ಗಂಟೆಗೆ ಎಂ.ಶ್ರೀನಿವಾಸಾಚಾರಿ ಅವರ ನಿರ್ದೇಶನದಲ್ಲಿ ರಾಜ ಸತ್ಯವ್ರತ ಅಥವಾ ಶನಿದೇವರ ಪ್ರಭಾವ ನಾಟಕ ಪ್ರದರ್ಶನ ನಡೆಯಲಿದೆ ಎಂದು ದೇವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಗುಲಗಳು ಸಜ್ಜು: ತಾಲ್ಲೂಕಿನ ವಿವಿಧೆಡೆ ಶಿವರಾತ್ರಿ ಸಂಭ್ರಮಕ್ಕೆ ಶಿವ ದೇವಾಲಯಗಳು ಸಜ್ಜಾಗಿವೆ. ಸಮಂದೂರು ಸಮೀಪದ ತಿಮ್ಮಸಂದ್ರ ಗೇಟ್ನ ಶಿವ ಆಶ್ರಮದಲ್ಲಿ ಎಸ್ಎಸ್ಎನ್ ಪ್ರತಿಷ್ಠಾನದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಸಾಮಾಜಿಕ ಆಯೋಜಿಸಲಾಗಿದ್ದು, ಆರೋಗ್ಯ ತಪಾಸಣಾ ಶಿಬಿರಲ್ಲಿ ಹೃದಯ, ಕಣ್ಣು, ಸ್ತ್ರೀರೋಗ, ಮಕ್ಕಳ ತಜ್ಞರು ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಸೋಮಶೇಖರ್ ಮತ್ತು ರಾಜಶೇಖರ್ ತಿಳೀಸಿದರು.
ತಾಲ್ಲೂಕಿನ ಮರಸೂರು ಗೇಟ್ನ ಪಂಚವಟಿ ಯೋಗಾಶ್ರಮ, ಕಮ್ಮಸಂದ್ರದ ಕಾಶಿ ವಿಶ್ವನಾಥ ಸ್ವಾಮಿ, ನೆರಳೂರು ವಿಶ್ವನಾಥೇಶ್ವರ, ಮುತ್ತಗಟ್ಟಿ ಬಸವೇಶ್ವರ, ಗೆರಟಿಗನಬೆಲೆ ಪವಾಡ ಬಸವೇಶ್ವರ ಸ್ವಾಮಿ, ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಆಚರಣೆಗೆ ಸಿದ್ಧತೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.