
ಆನೇಕಲ್: ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲು ತಾಲ್ಲೂಕಿನಲ್ಲಿ ಜನತೆ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕೊಳ್ಳಲು ಬುಧವಾರ ಪಟ್ಟಣದಲ್ಲಿ ಜನರು ಜಮಾಯಿಸಿದ್ದರಿಂದ ರಸ್ತೆ ದಟ್ಟಣೆ ಉಂಟಾಗಿತ್ತು. ತಿಲಕ್ ವತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರು.
ಎಲ್ಲಾ ಹಬ್ಬಗಳು ಜನರ ಹಬ್ಬಗಳಾದರೇ ಸಂಕ್ರಾಂತಿ ರಾಸುಗಳ ಹಬ್ಬ. ಹಾಗಾಗಿ ರೈತರು ರಾಸುಗಳನ್ನು ಸಿಂಗರಿಸಲು ಅವಶ್ಯಕ ಸಾಮಗ್ರಿಗಳಾದ ಹೊಸ ಹಗ್ಗ, ಮೂಗುದಾರ, ಕತ್ತಿನ ಕಣ್ಣಿ, ಕಪ್ಪು ದೃಷ್ಠಿದಾರ, ಗೆಜ್ಜೆ , ಗಂಟೆ, ಬಲೂನ್, ಬಣ್ಣಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕೊಳ್ಳುವುದರಲ್ಲಿ ನಿರತರಾಗಿದ್ದರು.
ಗ್ರಾಮೀಣ ಭಾಗದ ರೈತರು ಹಬ್ಬದಲ್ಲಿ ರಾಸುಗಳನ್ನು ಸಿಂಗರಿಸಿ ತಮ್ಮ ಸಂಭ್ರಮವನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಎಳ್ಳು ಬೆಲ್ಲವನ್ನು ಸಿದ್ಧಪಡಿಸುವ ಸಲುವಾಗಿ ಅವಶ್ಯಕ ಸಾಮಗ್ರಿ ಖರೀದಿಗೆ ಜನರು ಮುಗಿಬಿದ್ದಿದ್ದರು.
ಹಬ್ಬದಲ್ಲಿ ಕಡಲೆಕಾಯಿ, ಅವರೇಕಾಯಿ, ಗೆಣಸು ಬೇಯಿಸಿ ತಿನ್ನುವುದು ವಾಡಿಕೆಯಾಗಿದೆ. ಅವರೇಕಾಯಿ ಕೆಜಿಗೆ ₹100–120 ಮಾರಾಟವಾಗುತ್ತಿತ್ತು. ಕಡಲೆಕಾಯಿ ಕೆಜಿಗೆ ₹140–150, ಗೆಣಸು ₹80–100, ಕಬ್ಬು ಒಂದು ಜಲ್ಲೆ ₹80ಕ್ಕೆ ಮಾರಾಟವಾಗುತ್ತಿತ್ತು. ಹೂವುಗಳ ಬೆಲೆಯೂ ಏರಿಕೆಯಾಗಿತ್ತು.
ರಾಸುಗಳ ಹಬ್ಬ ಹಾಗೂ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಬೆಲೆ ಏರಿಕೆಯ ನಡುವೆಯೂ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಮುಖರಾಣಿ, ಕಂಬಳಿ ದಾರ, ಮೂಗುಜಿಮ್ರ ಸೇರಿದಂತೆ ರಾಸುಗಳ ಅಲಂಕಾರಕ್ಕೆ ವಿವಿಧ ವಸ್ತುಗಳನ್ನು ಖರೀದಿಲಾಗಿದೆ ಎಂದು ರೈತರ ವಣಕನಹಳ್ಳಿಯ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.