ತೂಬಗೆರೆ(ದೊಡ್ಡಬಳ್ಳಾಪುರ): ಗ್ರಾಮಸ್ಥರ ಸಹಕಾರದಿಂದ ಮೂರು ವರ್ಷದ ಸತತ ಕಾನೂನು ಹೋರಾಟದ ಫಲವಾಗಿ ತಾಲ್ಲೂಕಿನ ಮೇಲಿನಜೂಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಜೂರು ಗ್ರಾಮದ ಬಲಾಢ್ಯರು ಕಬಳಿಸಿದ್ದ ಗೋಮಾಳ ಜಮೀನಲ್ಲಿ ಆಶ್ರಯ ಯೋಜನೆಗಾಗಿ ಸುಮಾರು 8 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ವಕೀಲ ಪ್ರತಾಪ್ ತಿಳಿಸಿದರು.
ತಾಲ್ಲೂಕಿನ ಮಾಕಳಿ ದುರ್ಗ ರೈಲ್ವೆ ನಿಲ್ದಾಣ ಸಮೀಪ ನಡೆದ ಸಭೆಯಲ್ಲಿ ಮಾತನಾಡಿ, ಸದ್ಯ ಗುಂಜೂರು ಗ್ರಾಮದ ಸರ್ವೇ ನಂಬರ್ 33ರಲ್ಲಿ 8 ಎಕರೆ ನಿವೇಶನಕ್ಕಾಗಿ ಮಂಜೂರಾಗಿರುವ ಜಾಗಕ್ಕೆ 500ಕ್ಕೂ ಹೆಚ್ಚು ಜನ ನಿವೇಶನಕ್ಕೆ ಗ್ರಾಮ ಪಂಚಾಯಿತಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ನಿವೇಶನ ದೊರಕುವ ನಂಬಿಕೆ ಇದೆ ಎಂದರು.
ಘಾಟಿ ಸುತ್ತಾಮುತ್ತಾ ಸರ್ಕಾರಿ ಜಮೀನುಗಳನ್ನು ಬಲಾಢ್ಯರು ಕಬಳಿಕೆ ಮಾಡುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸರ್ಕಾರ ಈ ಕೂಡಲೇ ಪರಿಶೀಲನೆ ಮಾಡಿ ಸರ್ಕಾರಿ ಜಮೀನುಗಳನ್ನು ಉಳಿಸಿ, ಭೂ ರಹಿತ ಬಡ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಮೇಲಿನಜೂಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತ ಹಳ್ಳಿಗಳಿಗೆ ಇದೊಂದು ಸುಸಂದರ್ಭ. ಕೆಲವು ಹಳ್ಳಿಗಳಿಗೆ ಆಶ್ರಯ ಯೋಜನೆಗೆ ಜಮೀನು ಸಿಕ್ಕಿರುವುದು ಒಳ್ಳೆಯ ಸಂಗತಿ. ಬೆಂಗಳೂರಿನವರು ಬಂದು ಇಲ್ಲಿ ಜಮೀನನ್ನು ಕಬಳಿಸುತ್ತಿದ್ದಾರೆ. ಸ್ಥಳೀಯರು ಎಚ್ಚೆತ್ತುಕೊಂಡರೆ ಮಾತ್ರ ನಮಗೆ ಜಮೀನು ದೊರೆಯಲಿದೆ ಎಂದರು.
ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಕುಮಾರ್, ಮುನಿಕೃಷ್ಣಪ್ಪ, ತೂಬಗೆರೆ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ವಾಸುದೇವ, ಜೆಡಿಎಸ್ ಮುಖಂಡ ಉದಯಆರಾಧ್ಯ, ಘಾಟಿ ಸುಬ್ರಹ್ಮಣ್ಯ ದೇವಾಲಯ ಅರ್ಚಕ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.