ADVERTISEMENT

ಗ್ರಾಹಕರ ₹1.89 ಕೋಟಿ ದುರ್ಬಳಕೆ: ಬ್ಯಾಂಕ್‌ ಮ್ಯಾನೇಜರ್‌ ನಾಪತ್ತೆ

ಆನ್‌ಲೈನ್‌ ಜೂಜು, ಕ್ಯಾಸಿನೊಗಳಿಗೆ ಹಣ ಬಳಕೆ ಶಂಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 17:36 IST
Last Updated 22 ಜುಲೈ 2023, 17:36 IST
ಗಣೇಶ್ ಬಾಬು
ಗಣೇಶ್ ಬಾಬು   

ದೇವನಹಳ್ಳಿ: ಗ್ರಾಹಕರ ಖಾತೆಗಳಿಂದ ₹1.89 ಕೋಟಿ ಬಳಸಿಕೊಂಡ ತಾಲ್ಲೂಕಿನ ಚನ್ನರಾಯಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮ್ಯಾನೇಜರ್‌ ಗಣೇಶ್ ಬಾಬು ಮತ್ತು ಕಚೇರಿಯ ಸಹಾಯಕ  ಜಿತೇಂದ್ರ ಕುಮಾರ್‌ ತಲೆಮರೆಸಿಕೊಂಡಿದ್ದಾರೆ. ಇಬ್ಬರ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. 

ಜೂನ್ 3 ರಿಂದ ಜುಲೈ 17ರ ಅವಧಿಯಲ್ಲಿ ಈ ಇಬ್ಬರು ಸೇರಿ ಗ್ರಾಹಕರ ಖಾತೆಗಳಿಂದ ಆರ್‌ಟಿಜಿಎಸ್ ಮೂಲಕ ಹಂತ, ಹಂತವಾಗಿ ಕೆಲವು ಖಾತೆಗಳಿಗೆ ₹1.88 ಕೋಟಿ ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಜರಾತ್‌ ಮೂಲದ ಆನ್‌ಲೈನ್‌ ಜೂಜು ಮತ್ತು ಕ್ಯಾಸಿನೊಗಳಿಗೆ ಆರೋಪಿಗಳು ಈ ಹಣ ಬಳಸಿಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲು ಸರ್ಕಾರ ವರ್ಗಾವಣೆ ಮಾಡಿದ ಹಣ ಖಾತೆಗಳಲ್ಲಿ ಜಮಾ ಆಗಿದೆಯೇ ಎಂದು ಪರಿಶೀಲಿಸಲು ಮೂರ‍್ನಾಲ್ಕು ದಿನಗಳ ಹಿಂದೆ ಗ್ರಾಹಕರು ಬ್ಯಾಂಕ್‌ಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಆದರೆ, ಅದಕ್ಕೂ ಮೊದಲೇ ಮ್ಯಾನೇಜರ್ ಮತ್ತು ಕಚೇರಿ ಸಹಾಯಕ ಕೆಲಸಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. 

ADVERTISEMENT

 ಗ್ರಾಹಕರು ಗುರುವಾರ ಬ್ಯಾಂಕ್‌ ಮುಂದೆ ಪ್ರತಿಭಟನೆ ನಡೆಸಿ, ಚನ್ನರಾಯಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 

ಇಬ್ಬರನ್ನೂ ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಬ್ಯಾಂಕ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಹಕರ ಹಣ ಮರಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿತೇಂದ್ರ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.