ADVERTISEMENT

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮತದಾನ ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:52 IST
Last Updated 22 ಡಿಸೆಂಬರ್ 2025, 2:52 IST
ದೊಡ್ಡಬಳ್ಳಾಪುರ ನಗರಸಭೆಯ ಉಪಚುನಾವಣೆಯ ವಾರ್ಡ್‌ ಸಂಖ್ಯೆ 21ರ ಮಹಿಳಾ ಸಮಾಜದಲ್ಲಿನ ಮತಗಟ್ಟೆಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ತಹಶೀಲ್ದಾರ್‌ ಡಾ.ಮಲ್ಲಪ್ಪ ಕೆ.ಯರಗೋಳ ಭೇಟಿ ನೀಡಿ ಪರಿಶೀಲಿಸಿದರು
ದೊಡ್ಡಬಳ್ಳಾಪುರ ನಗರಸಭೆಯ ಉಪಚುನಾವಣೆಯ ವಾರ್ಡ್‌ ಸಂಖ್ಯೆ 21ರ ಮಹಿಳಾ ಸಮಾಜದಲ್ಲಿನ ಮತಗಟ್ಟೆಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ತಹಶೀಲ್ದಾರ್‌ ಡಾ.ಮಲ್ಲಪ್ಪ ಕೆ.ಯರಗೋಳ ಭೇಟಿ ನೀಡಿ ಪರಿಶೀಲಿಸಿದರು   

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ರಚನೆಯಾದ ನಂತರ ಇದೇ ಪ್ರಥಮ ಬಾರಿಗೆ ನಡೆದ ಮತದಾನದಲ್ಲಿ ಸಣ್ಣ ಪುಟ್ಟ ಮಾತಿನ ಚಕಮಕಿಗಳ ಹೊರತು ಒಟ್ಟಾರೆ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಶೇ__ ಮತದಾನ ನಡೆದಿದೆ.

ಕೈಗಾರಿಕಾ ಪ್ರದೇಶವನ್ನು ಹೊಂದಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲೂ ಸ್ಥಳಿಯರಷ್ಟೇ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಹೊರ ರಾಜ್ಯದವರು ಇಲ್ಲಿಗೆ ಬಂದು ನೆಲೆಸಿರುವ ಮತದಾರರ ಸಂಖ್ಯೆಯೂ ಸರಿಸಮನಾಗಿಯೇ ಇದೆ. ಹಾಗಾಗಿ ಸ್ಥಳೀಯರು ಯಾರು ? ಹೊರಗಿನವರು ಯಾರು ಎನ್ನುವುದು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸೇರಿದಂತೆ ಎಲ್ಲರಿಗೂ ಗೊಂದಲ ಉಂಟು ಮಾಡಿತ್ತು.

ಬಾಶೆಟ್ಟಿಹಳ್ಳಿ ವಾರ್ಡ್‌ ನಂಬರ್ 17ರಲ್ಲಿ ಬೇರೆಯವರ ಹಸರಿನಲ್ಲಿ ಮತ ಚಲಾಯಿಸಿರುವ ಆರೋಪಗಳು ಕೇಳಿಬಂದವು. ಅಲ್ಲದೆ ಬೇರೊಬ್ಬರ ಹೆಸರಿನಲ್ಲಿ ಮತಚಾಲಾಯಿಸಲು ಬಂದಿದ್ದ ವ್ಯಕ್ತಿಯನ್ನು ಪಕ್ಷದ ಸ್ಥಳೀಯ ಏಜೆಂಟ್‌ ಒಬ್ಬರು ಪ್ರಶ್ನಿಸಿ ಪೊಲೀಸರಿಗೆ ಒಪ್ಪಿಸಿದ ಪ್ರಕರಣವು ನಡೆಯಿತು.

ADVERTISEMENT

ಹೊರಗಿನಿಂದ ಬಂದು ನೆಲೆಸಿರುವವರ ಮತಗಳು ಹೆಚ್ಚು ಇರುವ ವಾರ್ಡ್‌ ಸಂಖ್ಯೆ 17ರಲ್ಲಿ ಸ್ಥಳೀಯ ನಿವಾಸಿ ದಕ್ಷತ್‌ ಎಂಬಾತ ಮತಚಲಾಯಿಸಲು ಹೋದಾಗ ಆತನ ಹೆಸರಿನಲ್ಲಿ ಬೇರೊಬ್ಬರ ಮತಚಾಲಾಯಿಸಿದ್ದರು. ಇದರಿಂದಾಗಿ ದಕ್ಷತ್‌ ಮತದಾನದಿಂದ ವಂಚಿತನಾಗಿರುವ ಬಗ್ಗೆ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡು, ಮತದಾರರ ಪಟ್ಟಿ ಪರಿಷ್ಕರಣೆ ಸರಿಯಾಗಿ ನಡೆಯಬೇಕು ಎಂದು ಆಗ್ರಹಿಸಿದರು.

ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ನಾಲ್ಕು ವರ್ಷಗಳ ನಂತರ ಚುನಾವಣೆ ನಡೆದಿದ್ದರಿಂದ ಎಲ್ಲಾ ವಯೋಮಾನದ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗಳ ಕಡೆಗೆ ಬಂದು ಮತಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು. ಎಳ್ಳುಪುರ ವಾರ್ಡ್‌ನ ಮತಗಟ್ಟೆಯಲ್ಲಿ 90 ವರ್ಷದ ಶಾರದಬಾಯಿ ಅವರು ವೀಲ್ಹ್‌ಛೇರ್‌ನಲ್ಲಿ ಬಂದು ಮತಚಲಾಯಿಸಿದರು.

ಬಿಜೆಪಿಗೆ ತಟ್ಟಿದ ಬಂಡಾಯದ ಬಿಸಿ‌

ಅಧಿಕೃತವಾಗಿ ನಾಲ್ಕು ವಾರ್ಡ್‌ಗಳು ಸೇರಿದಂತೆ ಹಲವಾರು ಕಡೆಗಳಲ್ಲಿ ಬಿಜೆಪಿಯಲ್ಲೇ ಇದ್ದವರು ಬಂಡಾಯವಾಗಿ ಸ್ಪರ್ಧಿಸಿದ್ದರಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಮತಯಾಚನೆ ಸೇರಿದಂತೆ ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳಲು ಹೆಣಗಾಡುವಂತಾಗಿತ್ತು. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಒಂದಿಷ್ಟು ಪ್ರಭಾವ ಹೊಂದಿರುವ ಬಮೂಲ್‌ ನಿರ್ದೆಶಕ ಹಾಗೂ ಬಿಜೆಪಿ ಮುಖಂಡ ಬಿ.ಸಿ.ಆನಂದಕುಮಾರ್‌ ಅವರ ಹತ್ತಿರದ ಸಂಬಂಧಿ ಮತ್ತು ಇವರ ಆಪ್ತರೆ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಇವರ ಪರವಾಗಿ ಬಿ.ಸಿ.ಆನಂದಕುಮಾರ್‌ ಬಹಿರಂಗವಾಗಿಯೇ ಪ್ರಚಾರ ಮತ್ತು ‘ಎಲ್ಲಾ’ ರೀತಿಯ ಸಹಯಾವನ್ನು ಮಾಡುತ್ತಿರುವುದಾಗಿಯೂ ಹೇಳಿದ್ದರು. ಇದರಿಂದ ಬಿಜೆಪಿ ಚಿಹ್ನೆಯ ಮೇಲೆ ಅಧಿಕೃತವಾಗಿ ಸ್ಪರ್ಧಿಸಿದ್ದವರು ಹೆಚ್ಚಿನ ಶ್ರಮವಹಿಸಿ ಕೊನೆಯ ಕ್ಷಣದಲ್ಲೂ ಮತಯಾನೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಕ್ಕೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಬಂಡಾಯದ ಬಿಸಿ ಇರಲಿಲ್ಲ.

ಆಯುಕ್ತರ ಭೇಟಿ  

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಭಾನುವಾರ ನಡೆದ ಸಾರ್ವತ್ರಿಕಾ ಚುನಾವಣೆಯ ಮತಗಟ್ಟೆಗಳಿಗೆ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್‌.ಸಂಗ್ರೇಶಿ ಅವರು ಭೇಟಿ ನೀಡಿ ಮತದಾನದ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಉಪವಿಭಾಗಾಧಿಕಾರಿ ಎನ್‌.ದುರ್ಗಾಶ್ರೀ ಚುನಾವಣಾ ವೀಕ್ಷಕ ಶಿವಕುಮಾರ್ ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಇದ್ದರು. ಮತಗಳ ಎಣಿಕೆ ಡಿ.24 ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಯ ಒಂದು ವಾರ್ಡ್‌ಗೆ ನಡೆದ ಉಪಚುನಾವಣೆಯ ಮತಗಳ ಎಣಿಕೆ ಡಿ.24 ರಂದು ಬೆಳಗ್ಗೆ 8 ಗಂಟೆಯಿಂದ ನಗರದ ಕೊಂಗಾಡಿಯಪ್ಪ ಪ್ರೌಢ ಶಾಲೆಯಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.