ಹೊಸಕೋಟೆ: ’ಮೋಸದಿಂದ ಯುವತಿಗೆ ತಾಳಿ ಕಟ್ಟಿಸಿ ವಿಪರೀತ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಸಿಆರ್ಪಿಎಫ್ ಯೋಧರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಎತ್ತಿನಹೊಳೆಪುರದ ನಿವಾಸಿ ಯಲಹಂಕದ ಸಿಆರ್ಪಿಎಫ್ನಲ್ಲಿ ಕೆಲಸ ಮಾಡುತ್ತಿರುವ ಪ್ರಮೋದ್ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
ಶನಿವಾರ ಸುದ್ದಿಗೋಷ್ಠಿಗೆ ಪೋಷಕರೊಂದಿಗೆ ಹಾಜರಾದ ಅವರು,’ನಮ್ಮ ಊರಿನ ಅನುಜಾ ಎಂಬ ಯುವತಿ ಸುಳ್ಳು ಆರೋಪ ಮಾಡುತ್ತಿದ್ದು ಸೂಕ್ತತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವುದಾಗಿ’ ತಿಳಿಸಿದರು.
ಘಟನೆ ವಿವರ: ಕಳೆದ ಹಲವು ದಿನಗಳ ಹಿಂದೆ ನಂದಗುಡಿ ಪೊಲೀಸ್ ಠಾಣೆ ಎದುರು ಅನುಜಾ ಎಂಬ ಯುವತಿ ಹಾಗೂ ಕುಟುಂಬ ಸದಸ್ಯರು ಧರಣಿ ನಡೆಸಿ, ಪ್ರಮೋದ್ ಮದುವೆ ಆಗಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದರು. ಈ ಕುರಿತು ಮಾಹಿತಿ ನೀಡಿದ ಪ್ರಮೋದ್, ಯಲಹಂಕ ಸಿಆರ್ಪಿಎಫ್ನಲ್ಲಿ ಕರ್ತವ್ಯದಲ್ಲಿದ್ದಾಗ ಅಲ್ಲಿಗೆ ಬಂದ ಅನುಜಾ ಮತ್ತು ಅವರ ಸ್ನೇಹಿತರು ಅವಾಚ್ಯವಾಗಿ ನಿಂದಿಸಿ ಜ್ಞಾನ ತಪ್ಪುವಂತೆ ಮಾಡಿದರು. ಬಲವಂತವಾಗಿ ತಾಳಿ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ. ’ನಾನು ಎಲ್ಲಿಯೂ ತಪ್ಪಿಸಿಕೊಂಡು ಹೋಗಿಲ್ಲ. ನಮ್ಮ ಕಚೇರಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ನ್ಯಾಯ’ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
’ನಮ್ಮ ಕುಟುಂಬದ ಮೇಲಿನ ಹಳೆ ವೈಷಮ್ಯದಿಂದ ಈ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪ್ರಮೋದ್ ತಂದೆ, ತಾಯಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.