ಆನೇಕಲ್: ತಾಲ್ಲೂಕಿನ ಸರ್ಜಾಪುರದಲ್ಲಿ ವಿಡುದಲೈ ಚಿರತೆಗಳ್ ಕಚ್ಚಿ(ವಿಸಿಕೆ) ಪಕ್ಷದಿಂದ ಭೀಮ ಕೋರೆಗಾಂವ್ ವಿಜಯೋತ್ಸವ ಸಂಭ್ರಮಾಚರಣೆ ಹಾಗೂ ಬೈಕ್ ರ್ಯಾಲಿ ನಡೆಯಿತು.
ಸರ್ಜಾಪುರದ ಅಂಬೇಡ್ಕರ್ ಆಟದ ಮೈದಾನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಸರ್ಜಾಪುರ, ಅತ್ತಿಬೆಲೆ, ಆನೇಕಲ್ವರೆಗೆ ಬೈಕ್ ರ್ಯಾಲಿ ನಡೆಸಿ ಆನೇಕಲ್ನ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.
ವಿಜಯೋತ್ಸವದ ಪ್ರಯುಕ್ತ ಸಂಘಟನೆಯಿಂದ ವಿಜಯಸ್ತಂಭ ಸ್ಥಾಪಿಸಿ ಗೌರವ ಸೂಚಿಸಿದರು.
ಭೀಮಾ ಕೋರೆಗಾಂವ್ ವಿಜಯೋತ್ಸ ಶೋಷಿತರ ಶೌರ್ಯದ ಸಂಕೇತವಾಗಿದೆ. ಪೇಶ್ವೆಯರ ಆಡಳಿತದಲ್ಲಿ ಜಾತಿ ವ್ಯವಸ್ಥೆ, ಆಸ್ಪೃಶ್ಯತೆ, ದೌರ್ಜನ್ಯ ವಿರುದ್ಧ ನಡೆದ ಹೋರಾಟವಾಗಿದೆ. 500 ಮಹರ್ ಸೈನಿಕರು 30ಸಾವಿರ ಪೇಶ್ವೇಯರ ಪಡೆಯನ್ನು ಸೋಲಿಸಿದ ಐತಿಹಾಸಿಕ ಯುದ್ಧದ ಗೆಲುವಿನ ಸಂಕೇತವಾಗಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಸಿ.ಹಳ್ಳಿ ವೇಣು ತಿಳಿಸಿದರು.
ಆದರೆ ಈ ಐತಿಹಾಸಿಕ ಹೋರಾಟವನ್ನು ಮನುವಾದಿಗಳು ಮರೆಮಾಚಿದ್ದರು. ಭೀಮ ಕೋರೆಗಾಂವ್ ವಿಜಯೋತ್ಸವ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು.
ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಶೋಷಿತರ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ. ಕೇಂದ್ರ ಸರ್ಕಾರ ಸಂವಿಧಾನ ಬದಲಿಸುವ ಮಾತುಗಳನ್ನಾಡುತ್ತಿದೆ. ಈ ಬಗ್ಗೆ ದೇಶದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಕಾರ್ಯದರ್ಶಿ ರಾಜಕುಮಾರ್, ಐಸಾಕ್ ಅಮೃತ್ ರಾಜ್, ಮುಖಂಡರಾದ ನಾಗಮಣಿ ಮೌರ್ಯ, ಶ್ರೀನಾಥ್ ನಾಸ್ತಿಕ್, ವಂದೇ ಮಾತರಂ ಮಹೇಶ್, ವೀಣಾ ಕುಮಾರಿ, ಮುರಳಿ ಬೌದ್, ಭರತ್, ಮಂಜುನಾತ್, ಪುಷ್ಪಾವತಿ, ಜಗದೀಶ್, ಸತೀಶ್, ನಾಗರಾಜು, ಸತೀಶ್, ಆದೂರು ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.