ADVERTISEMENT

ಬೈಕ್‌, ಕಾರಿಗೆ ಬೆಂಕಿ ಇಟ್ಟ ಕಿಡಿಗೇಡಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 1:49 IST
Last Updated 18 ಜನವರಿ 2021, 1:49 IST
ದೊಡ್ಡಬಳ್ಳಾಪುರದ ಶ್ರೀನಗರದಲ್ಲಿ ಬೆಂಕಿಗೆ ಆಹುತಿಯಾಗಿರುವ ಬೈಕ್‍ಗಳು
ದೊಡ್ಡಬಳ್ಳಾಪುರದ ಶ್ರೀನಗರದಲ್ಲಿ ಬೆಂಕಿಗೆ ಆಹುತಿಯಾಗಿರುವ ಬೈಕ್‍ಗಳು   

ದೊಡ್ಡಬಳ್ಳಾಪುರ: ಮುಂಜಾನೆ ಮೂರು ಗಂಟೆ ಸಮಯದಲ್ಲಿ ಮುಸುಕು ಧರಿಸಿ ಬಂದಿದ್ದ ದುಷ್ಕರ್ಮಿಯೊಬ್ಬ ಮನೆ ಮುಂದೆ ನಿಲ್ಲಿಸಿದ ಕಾರು, ಕಾಂಪೌಂಡ್ ಒಳಗಿದ್ದ 8 ಬೈಕ್‍ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿಡಿಗೇಡಿ ಇಡೀ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಗರದ ಶ್ರೀನಗರದ ರೈಲ್ವೆ ಸ್ಟೇಷನ್ ಹಿಂಭಾಗದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ವಿದ್ಯುತ್ ಗುತ್ತಿಗೆದಾರರಾದ ಶಿವಕುಮಾರ್ ಮನೆ ಮುಂದೆ ನಿಲ್ಲಿಸಿದ್ದ ಓಮ್ಲಿ ಕಾರು ಮತ್ತು 8 ಬೈಕ್‍ಗಳು ಬೆಂಕಿಗೆ ಅಹುತಿಯಾಗಿವೆ. ಕಾಂಪೌಂಡ್‍ನಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಹೊತ್ತಿ ಉರಿಯುತ್ತಿದ್ದನ್ನು ಗಮನಿಸಿದ ನೆರೆಹೊರೆ ಮನೆಯವರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಕಾಂಪೌಂಡ್‍ನಲ್ಲಿದ್ದ 8 ಬೈಕ್‍ಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಬೈಕ್‍ನಲ್ಲಿ ಹೆಲ್ಮೆಟ್ ಧರಿಸಿದ ಬಂದ ಕಿಡಿಗೇಡಿ ಮೊದಲಿಗೆ ಶಿವಕುಮಾರ್ ಮನೆಯ ಮುಂದೆ ನಿಲ್ಲಿಸಿದ ಓಮ್ನಿ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ. ಪಕ್ಕದ ಮನೆಯಕಾಂಪೌಂಡ್ ಹತ್ತಿ ಶಿವಕುಮಾರ್ ಕಾಂಪೌಂಡ್ ಒಳಗೆ ನುಗ್ಗಿ ಬೈಕ್ ಗಳಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾನೆ.

ADVERTISEMENT

ಕಿಡಿಗೇಡಿಯೊಬ್ಬ ವಾಹನಗಳಿಗೆ ಬೆಂಕಿ ಇಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.