ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆದಿದೆ. ದೊಡ್ಡಬಳ್ಳಾಪುರ ನಗರಸಭೆ ಮಾದರಿಯಲ್ಲೇ ಅತಂತ್ರ ಸ್ಥಿತಿ ಇರುವ ಇತರೆಡೆಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಅವರು ಮಂಗಳವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಸದಸ್ಯೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ, ಉಪಾಧ್ಯಕ್ಷೆ ಫರ್ಹಾನಾ ತಾಜ್ ಅವರನ್ನು ಅಭಿನಂದಿಸಿ ಮಾತನಾಡಿದರು.
‘ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆಯೇ ನಡೆದುಕೊಂಡಿದ್ದಾರೆ. ರಾಜ್ಯದ ಇತರ ಕಡೆಯು ಜೆಡಿಎಸ್ ಬೆಂಬಲ ನೀಡುವ ವಿಶ್ವಾಸ ಇದೆ. ಸ್ಥಳೀಯವಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ನಗರದ ಅಭಿವೃದ್ಧಿ ದೃಷ್ಟಿಯಿಂದ ಒಳಿತಾಗಲಿದೆ ಎನ್ನುವ ಅಭಿಪ್ರಾಯ ನೀಡಿದ್ದರಿಂದಲೇ ಬಿಜೆಪಿ-ಜೆಡಿಎಸ್ ಆಡಳಿತಕ್ಕೆ ಬಂದಿದೆ’ ಎಂದರು.
‘ಕಾಂಗ್ರೆಸ್ನ ನಕಲಿ ಜಾತ್ಯತೀತ ರಾಜ್ಯದ ಮತದಾರರಿಗೆ ಅರ್ಥವಾಗಿದೆ. ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್, ಸಿದ್ದರಾಮಯ್ಯ ಕಾಂಗ್ರೆಸ್ ಎರಡು ಪಕ್ಷಗಳಿವೆ. ದೆಹಲಿಯಲ್ಲಿ ಮೂರು ರೀತಿಯ ಕಾಂಗ್ರೆಸ್ ಪಕ್ಷಗಳಿವೆ. ರಾಜ್ಯ ಕಾಂಗ್ರೆಸ್ ನಾಯಕರು ತಮಗೆ ಬೇಕಾದಾಗೆಲ್ಲ ‘ಬಿ’ ಟೀಂ ಸೃಷ್ಟಿಸಲು ಹೋಗಿ ಈಗ ರಾಜ್ಯದಲ್ಲಿ ‘ಸಿ’ ಟೀಂ ಆಗಿದ್ದಾರೆ’ ಎಂದೂ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.